ತುಮಕೂರು: ಆಯುಧ ಪೂಜೆ ಸಮೀಪಿಸುತ್ತಿದ್ದಂತೆ ನಗರದ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಬೂದುಗುಂಬಳಕಾಯಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಇದರ ಗಾತ್ರಕ್ಕೆ ತಕ್ಕಂತೆ ₹ 20 ರಿಂದ ₹ 30 ರವರೆಗೆ ಮಾರಾಟವಾಗುತ್ತಿದೆ. ಗ್ರಾಹಕರು ಕೊಂಡುಕೊಳ್ಳಲು ಮುಗಿದು ಬೀಳುತ್ತಿದ್ದಾರೆ.
ವಿಶೇಷವಾಗಿ ಆಯುಧ ಪೂಜೆಗೆ ಬೂದುಗುಂಬಳಕಾಯಿ ಒಡೆಯುವುದು ಸಂಪ್ರದಾಯ. ಮನೆ, ಅಂಗಡಿ, ಕಾರ್ಖಾನೆ, ವಾಹನಗಳಿಗೆ ಸೇರಿದಂತೆ ಪ್ರತಿಯೊಂದಕ್ಕೂ ಕಾಯಿ ಒಡೆದು ಹಬ್ಬ ಆಚರಿಸಲಾಗುತ್ತದೆ. ಆದಕಾರಣ ಇದು ತುಂಬಾ ವಿಶೇಷವಾದುದು.
ಜಿಲ್ಲೆಯಲ್ಲಿ ಈ ಕಾಯಿ ಬೆಳೆಯುವುದು ತೀರಾ ಕಡಿಮೆಯಾಗಿದೆ. ಗೌರಿಬಿದನೂರು ತಾಲ್ಲೂಕು ಸುತ್ತಮುತ್ತ ಹಾಗೂ ಆಂಧ್ರದ ಗಡಿ ಪ್ರದೇಶಗಳಲ್ಲಿ ಹೆಚ್ಚು ಬೆಳೆಯುವರು. ಅಲ್ಲಿಂದ ಒಂದು ಟನ್ಗೆ ₹ 15 ಸಾವಿರ ಲೆಕ್ಕಚಾರದಲ್ಲಿ ವ್ಯಾಪಾರಿಗಳು ಖರೀದಿಸುವರು.
ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ರಾಶಿಗಟ್ಟಲೇ ಕಾಯಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ. ಇನ್ನು ಕೆಲವು ವ್ಯಾಪಾರಿಗಳು ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳು, ಬೆಂಗಳೂರು, ತಮಿಳುನಾಡು ಸೇರಿದಂತೆ ನೆರೆ ರಾಜ್ಯಗಳಿಗೂ ಕಾಯಿಯನ್ನು ಕಳುಹಿಸುತ್ತಿದ್ದಾರೆ.
ಮಳೆಯಿಂದ ಬೆಲೆ ಕಡಿಮೆ: ಕಳೆದ ವರ್ಷಕ್ಕಿಂತ ಈ ಬಾರಿ ಮಳೆಯ ಉತ್ತಮವಾಗಿದೆ. ಆದಕಾರಣ ಮಾರುಕಟ್ಟೆಗೆ ಕಾಯಿ ಹೆಚ್ಚು ಬರುತ್ತಿದ್ದು ಬೆಲೆ ತುಂಬಾ ಕಡಿಮೆಯಾಗಿದೆ.
ಸಣ್ಣ ಪುಟ್ಟ ರೈತರು ನಗರದ ಬಿ.ಎಚ್.ರಸ್ತೆ, ಶಿರಾಗೇಟ್, ಹನುಮಂತಪುರ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀದಿ ಬದಿಯೇ ವ್ಯಾಪಾರ ಮಾಡುತ್ತಿದ್ದಾರೆ. ಮಳೆಯಿಂದ ಕಾಯಿ ಹಾಳಾಗುತ್ತದೆ ಎನ್ನುವ ಆತಂಕ ಸಹ ಇದೆ.