ಸೋಂಕಿತ ವ್ಯಕ್ತಿ ಗುರುವಾರ ರಾತ್ರಿ ಚಿಕಿತ್ಸೆಗಾಗಿ ಬಂದಿದ್ದರು. ರಾತ್ರಿ ಪಾಳಿಯ ವೈದ್ಯರು ಸ್ಪಂದಿಸದ ಕಾರಣ ಬೆಳಿಗ್ಗೆವರೆಗೆ ಆಸ್ಪತ್ರೆಯ ಪಡಸಾಲೆಯ ಕುರ್ಚಿಯಲ್ಲಿ ಕುಳಿತು ಕಾಲ ಕಳೆದಿದ್ದಾರೆ. ಬೆಳಿಗ್ಗೆ ಅವರ ಸಂಬಂಧಿಯಾದ ವಕೀಲ ಗಂಗಾಧರ್ ಎಂಬುವರು ಬಂದು ವೈದ್ಯರಿಗೆ ಮನವಿ ಮಾಡಿದ್ದಾರೆ. ಆ ಸಮಯದಲ್ಲಿ ಕರ್ತವ್ಯನಿರತ ವೈದ್ಯರು ಶಾಸಕರ ಆಪ್ತ ಸಹಾಯಕ ಚಂದ್ರ ಅವರನ್ನು ಸಂಪರ್ಕಿಸಲುಸೂಚಿಸಿದ್ದಾರೆ. ಇದಕ್ಕೆ ವಕೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ‘ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಜಕೀಯ ಪ್ರವೇಶವಾಗಿದೆ. ರಾಜಕೀಯ ಮುಖಂಡರ ಪ್ರಭಾವವಿದ್ದರೆ ಮಾತ್ರ ಸೌಲಭ್ಯ ದೊರೆಯುತ್ತಿವೆ’ ಎಂದು ಆರೋಪಿಸಿ ಸೋಂಕಿತನನ್ನು ಆಸ್ಪತ್ರೆಯ ಬಾಗಿಲ ಬಳಿ ಮಲಗಿಸಿ ಪ್ರತಿಭಟನೆ ನಡೆಸಿದರು.