ಕೊರಟಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಒಂದಾದ ಜಲ ಜೀವನ್ ಮಷಿನ್ (ಮನೆ ಮನೆ ಗಂಗೆ) ಕಾಮಗಾರಿ ತಾಲ್ಲೂಕಿನಲ್ಲಿ ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಿಯಮದ ಪ್ರಕಾರ 20 ಮನೆಗಳಿಗಿಂತ ಜಾಸ್ತಿ ಇರುವ ಗ್ರಾಮಗಳ ಮನೆ ಮನೆಗೆ ಕೊಳಯಿ ಅಳವಡಿಸಿ ನಿತ್ಯ ನೀರು ಒದಗಿಸುವುದಾಗಿದೆ. ತಾಲ್ಲೂಕಿನಲ್ಲಿ 337 ಹಳ್ಳಿಗಳು ಈ ಯೋಜನೆಗೆ ಒಳಪಟ್ಟಿವೆ. ಅದರಲ್ಲಿ 170 ಹಳ್ಳಿಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಗ್ರಾಮೀಣ ಕುಡಿಯುವ ನೀರು ಇಲಾಖೆಯಿಂದ ಕಾಮಗಾರಿ ಗುತ್ತಿಗೆ ಮೂಲಕ ನಡೆಯುತ್ತದೆ. ಆನ್ಲೈನ್ ಹರಾಜು ಮೂಲಕ ಗುತ್ತಿಗೆದಾರರು ಕಾಮಗಾರಿ ಪಡೆಯುತ್ತಾರೆ. ಒಂದೊಂದು ಗ್ರಾಮದ ಕಾಮಗಾರಿ ಒಬ್ಬೊಬ್ಬ ಗುತ್ತಿಗೆದಾರರು ಮಾಡುತ್ತಾರೆ. ಕೆಲವೆಡೆ ಮೂರ್ನಾಲ್ಕು ಗ್ರಾಮದ ಕಾಮಗಾರಿ ಕೂಡ ಒಬ್ಬರೇ ಗುತ್ತಿಗೆದಾರರು ನಿರ್ವಹಿಸುತ್ತಿದ್ದಾರೆ.
ಯೋಜನೆ ಅಡಿ ಈಗಾಗಲೇ ಕೈಗೊಂಡಿರುವ ಬಹುತೇಕ ಕಡೆಗಳಲ್ಲಿ ಕಾಮಗಾರಿ ಕಳಪೆಯಾಗಿದೆ. ಕೆಲವೆಡೆ ಬೇಕಾಬಿಟ್ಟಿಯಾಗಿ ಪೈಪ್ಲೈನ್ ಅಳವಡಿಸಲಾಗಿದೆ. ಗುಣಮಟ್ಟದ ಪೈಪ್ ಹಾಗೂ ಸಾಮಗ್ರಿ ಗುಣಮಟ್ಟ ಕಳಪೆಯಾಗಿದೆ. ಪೈಪ್ ಹಾಗೂ ಕೊಳಯಿ ಅಳವಡಿಸಲು ನಿಲ್ಲಿಸಿರುವ ಸಿಮೆಂಟ್ ಕಂಬ ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ. ಕೆಲವೆಡೆ ಹಾಕಿರುವ ಸಿಮೆಂಟ್ ಕಂಬ ಕೊಳಾಯಿಯಲ್ಲಿ ನೀರು ಬರುವ ಮುನ್ನವೇ ಉದುರಿಹೋಗಿದೆ. ಮನೆಗಳಲ್ಲಿ ವಿದ್ಯುತ್ ತಂತಿ ಎಳೆಯಲು ಬಳಸುವ ಪೈಪ್ ಮಾದರಿಯ ಪೈಪ್ ಹಾಕಿದ್ದಾರೆ ಎಂದು ಸಾರ್ವಜಿಕರು ದೂರಿದ್ದಾರೆ.
ಪೈಪ್ಲೈನ್ ಹಾಗೂ ಕೊಳಯಿ ಕನಿಷ್ಠ 35 ವರ್ಷ ಬಾಳಿಕೆ ಬರಬೇಕು ಎಂಬ ನಿಯಮವಿದೆ. ಆದರೆ ಈಗಾಗಲೇ ಅಳವಡಿಸಿರುವ ಪೈಪ್ಲೈನ್ ಹಾಗೂ ಕಾಮಗಾರಿ ಕನಿಷ್ಠ ಎರಡು-ಮೂರು ವರ್ಷ ಕೂಡ ಬಾಳಿಕೆ ಬರುವುದಿಲ್ಲ ಎಂದು ದೂರುತ್ತಾರೆ.
ತಾಲ್ಲೂಕಿನ ಗಡಿಭಾಗದ ಚಿಕ್ಕಪಾಳ್ಯ ಗ್ರಾಮದಲ್ಲಿ ತರಾತುರಿಯಲ್ಲಿ ಪೈಪ್ಲೈನ್ ಮಾಡಲಾಗಿದೆ. 80ಕ್ಕೂ ಹೆಚ್ಚು ಮನೆಗಳಿರುವ ಗ್ರಾಮದಲ್ಲಿ ಒಂದು ಕಡೆಯೂ ಗುಣಮಟ್ಟದ ಪೈಪ್ ಹಾಗೂ ಕೊಳಾಯಿ ಹಾಕಿಲ್ಲ. ಸಿಮೆಂಟ್ ಕಂಬ ಕಳಪೆಯಿಂದ ಕೂಡಿದ್ದು, ಹಾಕಿದ ವಾರದಲ್ಲೇ ಕೆಲವೆಡೆ ಪುಡಿಯಾಗಿ ಉದುರುತ್ತಿದೆ. ಕಬ್ಬಿಣದ ಪೈಪ್ ಕೂಡ ತೀರಾ ಕಳಪೆಯಾಗಿದೆ. ಒಂದು ವರ್ಷ ಕೂಡ ಬಾಳಿಕೆ ಬರುವುದಿಲ್ಲ. ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲಾಗಿದೆ ಎಂದು ಗ್ರಾಮದ ರಾಮಣ್ಣ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.