ಕುಣಿಗಲ್: ತಾಲ್ಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಜಾತ್ರೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಬಜರಂಗದಳ ಮುಖಂಡರು ಒತ್ತಾಯಿಸಿದ್ದಾರೆ.
ದೇವಾಲಯದ ವ್ಯವಸ್ಥಾಪಕ ಮಂಜುನಾಥ ಅವರಿಗೆ ಬಜರಂಗದಳ ಜಿಲ್ಲಾ ಸಂಚಾಲಕ ಹರೀಶ್ ನೇತೃತ್ವದ ತಂಡ ಗುರುವಾರ ಮನವಿ ಸಲ್ಲಿಸಿದೆ.
ಏ. 1ರಿಂದ ಎಡಿಯೂರು ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ದೇವಸ್ಥಾನದ ಜಾಗದಲ್ಲಿ ಹಿಂದೂ ಧರ್ಮದವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಬೇರೆ ಧರ್ಮದವರಿಗೆ ಅವಕಾಶ ನೀಡಬಾರದು. ಒಂದು ವೇಳೆ ದೇಗುಲಕ್ಕೆ ಸೇರಿದ ಜಾಗದಲ್ಲಿ ಅನ್ಯ ಧರ್ಮದವರು ಅಂಗಡಿ ಇಟ್ಟರೆ ತಹಶೀಲ್ದಾರ್ ಮುಖಾಂತರ ತೆರವುಗೊಳಿಸುವ ಅಧಿಕಾರ ಆಡಳಿತ ಮಂಡಳಿಗೆ ಇರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಾನೂನು ಪ್ರಕಾರ ದೇವಸ್ಥಾನದ ಜಾಗದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಇರುತ್ತದೆ. ಇದನ್ನು ಪಾಲಿಸಬೇಕು ಎಂದು ಕೋರಲಾಗಿದೆ.
ವಿರಾಟ್ ಹಿಂದೂ ಗೆಳೆಯರ ಬಳಗದ ಮುಖಂಡರಾದ ಸಂದೀಪ್, ಶ್ರೀನಿವಾಸ್, ಮಾರುತೀಶ್, ಮಹಾದೇವ, ಮಂಜುನಾಥ್, ಚೇತನ, ಪ್ರಸನ್ನ, ಯೋಗೇಶ್, ಆನಂದ್ ತಂಡದಲ್ಲಿ ಇದ್ದರು.