ತುಮಕೂರು: ದೇಶದ ಅಸ್ಪೃಷ್ಯರ ಪಾಲಿಗೆ ಜ. 1 ಅವಿಸ್ಮರಣೀಯ ದಿನ. ಮರಾಠ ಪೇಶ್ವೆಗಳ ದೊಡ್ಡ ಸೈನ್ಯವನ್ನು ಕೆಲವೇ ಮಂದಿ ಇದ್ದ ಭೀಮ ಸೇನೆ ಯೋಧರು 18 ಗಂಟೆಗಳ ಕಾಲ ಹೋರಾಡಿ ಗೆಲವು ತಂದುಕೊಟ್ಟ ಆತ್ಮವಿಶ್ವಾಸದ ದಿನ ಎಂದು ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ನಿಧಿಕುಮಾರ್ ಹೇಳಿದರು.
ನಗರದ ಟೌನ್ಹಾಲ್ ಮುಂಭಾಗ ಶುಕ್ರವಾರ ಅಂಬೇಡ್ಕರ್ ಪ್ರಚಾರ ಸಮಿತಿಯಿಂದ ಆಯೋಜಿಸಿದ್ದ ಭೀಮ್- ಕೋರೆಂಗಾಂ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೊದಲ ಸ್ವಾತಂತ್ರ ಸಂಗ್ರಾಮ ನಡೆಯುವ 30 ವರ್ಷಗಳ ಮೊದಲೇ 1818ರಲ್ಲಿ ಮರಾಠ ಪೇಶ್ವೆಗಳ ಅಸ್ಪೃಷ್ಯತೆ ವಿರುದ್ಧ ಸಿಡಿದೆದ್ದ ಭೀಮ ಸೇನೆಯು 30 ಸಾವಿರ ಪೇಶ್ವೆ ಸೈನ್ಯವನ್ನು ಬಗ್ಗು ಬಡಿಯಿತು. ಇದೇ ಕಾರಣಕ್ಕಾಗಿ ಅಂಬೇಡ್ಕರ್ ಎಲ್ಲೇ ಇದ್ದರೂ ಜ. 1ರಂದು ಕೋರೆಂಗಾವ್ಗೆ ಭೇಟಿನೀಡುತ್ತಿದ್ದರು. ಯುದ್ಧದ ವಿಜಯೋತ್ಸವದ ನೆನಪಿಗೆ ಬ್ರಿಟಿಷರು ನಿರ್ಮಿಸಿದ್ದ ವಿಜಯಸ್ತಂಭಕ್ಕೆ ನಮನ ಸಲ್ಲಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎನ್.ರಾಮಯ್ಯ, ‘2018ರಲ್ಲಿ ಕೋರೆಂಗಾಂ ವಿಜಯೋತ್ಸವದ ವೇಳೆ ನಡೆದ ಗಲಭೆಯನ್ನೇ ನೆಪವಾಗಿಟ್ಟುಕೊಂಡು ಅಂದಿನ ಮಹಾರಾಷ್ಟ್ರ ಸರ್ಕಾರವು ಬುದ್ಧಿಜೀವಿಗಳು, ಹೋರಾಟಗಾರರನ್ನು ಬಂಧಿಸಿ, ವಿಚಾರಣೆ ನಡೆಸದೆ ಕಾಲಹರಣ ಮಾಡುತ್ತಿದೆ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಬೇಕಿದೆ’ ಎಂದರು.