ಕುಣಿಗಲ್: ತಾಲ್ಲೂಕಿನಲ್ಲಿ ಕಾಲುಬಾಯಿ ರೋಗದ ಲಸಿಕೆ ವಿತರಣೆ ಏಪ್ರಿಲ್ 1ರಿಂದ ಪ್ರಾರಂಭವಾಗಿದ್ದು, ಸಿಬ್ಬಂದಿ ಹಾಗೂ ವಾಹನ ಕೊರತೆಯು ಲಸಿಕೆ ವಿತರಣೆಗೆ ಅಡ್ಡಿಯಾಗುತ್ತಿದೆ ಎಂದು ಸಿಬ್ಬಂದಿ ಮತ್ತು ರೈತರು ದೂರಿದ್ದಾರೆ.
ತಾಲ್ಲೂಕಿನಲ್ಲಿ 77,835 ಜಾನುವಾರುಗಳಿದ್ದು (2019-20 ಜಾನುವಾರು ಗಣತಿ) ಐದು ಪಶು ಆಸ್ಪತ್ರೆ, 15 ಪಶು ಚಿಕಿತ್ಸಾ ಕೇಂದ್ರ, 10 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿದೆ.
ಇಲಾಖೆಯಲ್ಲಿ 116 ಅಧಿಕಾರಿ ಮತ್ತು ಸಿಬ್ಬಂದಿಯ ಹುದ್ದೆ ಇದ್ದು, 46 ಭರ್ತಿಯಾಗಿದ್ದು, 70 ಹುದ್ದೆಗಳು ಖಾಲಿ ಇವೆ.
ಒಂದೆಡೆ ಸಿಬ್ಬಂದಿ ಕೊರತೆ, ಮತ್ತೊಂದೆಡೆ ಕಳೆದ ವರ್ಷ ನೀಡಿದ ವಾಹನ ಸೌಕರ್ಯ ಈ ಬಾರಿ ತುಮಕೂರು ಜಿಲ್ಲೆಗೆ ಮಾತ್ರ ನೀಡಿರುವ ಕಾರಣ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ ನೀಡಲು ತೆರಳಲು ಸಮಸ್ಯೆಯಾಗುತ್ತಿದೆ ಎಂದಿದ್ದಾರೆ.
ಕಳೆದ ವರ್ಷ ಎಂಟು ಮಾರ್ಗಗಳಲ್ಲಿ ಕೆಎಂಎಫ್ನಿಂದ ವಾಹನಗಳ ಸೌಕರ್ಯ ನೀಡಲಾಗಿತ್ತು. ಪ್ರಸಕ್ತ ವರ್ಷ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಕೆಎಂಎಫ್ ವಾಹನ ಸೌಕರ್ಯ ನೀಡಲು ನಿರಾಕರಿಸಿದೆ. ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕರ ವಾಹನವನ್ನು ಸಹ ಚುನಾವಣೆ ಉದ್ದೇಶಕ್ಕೆ ಬಳಸಿಕೊಂಡಿದ್ದು, ವಾಹನಗಳಿಲ್ಲದೆ ಸಕಾಲಕ್ಕೆ ಗ್ರಾಮಗಳಿಗೆ ತೆರಳಿ ಲಸಿಕೆ ನೀಡಲು ಸಮಸ್ಯೆಯಾಗುತ್ತಿದೆ ಎಂದು ಸಿಬ್ಬಂದಿ ದೂರಿದ್ದಾರೆ.
ಮೇಲ್ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸಹಾಯಕ ನಿರ್ದೇಶಕರ ದಿವಾಕರ್ ಅಸಹಾಯಕತೆ ವ್ಯಕ್ತಪಡಿಸಿ ಚುನಾವಣೆ ಅಧಿಕಾರಿಗಳಿಗೆ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಲಸಿಕೆ ವಿತರಣೆಗೆ ವಾಹನ ಸೌಕರ್ಯವಿಲ್ಲದ ಕಾರಣ ಸಿಬ್ಬಂದಿಗೆ ಒಂದು ಲಸಿಕೆ ಹಾಕಲು ಇಲಾಖೆಯಿಂದ ₹5, ಕೆಎಂಎಫ್ನಿಂದ ₹3 ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಹನ ಅನಿವಾರ್ಯ
ತುಮುಲು ನಿರ್ದೇಶಕ ಬೇಗೂರು ನಾರಾಯಣ ಪ್ರತಿಕ್ರಿಯಿಸಿ ಜಾನುವಾರುಗಳ ಆರೋಗ್ಯ ದೃಷ್ಟಿಯಿಂದ ಲಸಿಕೆ ನೀಡಲು ವಾಹನ ಸೌಕರ್ಯ ನೀಡಲೇಬೇಕಿದೆ. ಈ ಬಗ್ಗೆ ತುಮುಲ್ ವ್ಯವಸ್ಥಾಪಕ ನಿರ್ದೇಶಕರಲ್ಲಿ ಚರ್ಚೆ ಮಾಡಿ ವಾಹನ ಸೌಕರ್ಯಕ್ಕೆ ಆಗ್ರಹಿಸಲಾಗಿದೆ. ಸಂಬಂಧಪಟ್ಟ ಸಚಿವರೊಂದಿಗೂ ಚರ್ಚೆ ಮಾಡಿ ವಾಹನ ವ್ಯವಸ್ಥೆಗೆ ಗಮನಹರಿಸಲಾಗುವುದು ಎಂದಿದ್ದಾರೆ.