ಪಾವಗಡ: ಪಟ್ಟಣದ ಅಗಸರ ಕುಂಟೆಗೆ ತಡೆಗೋಟೆ ನಿರ್ಮಿಸುವ ಕಾಮಗಾರಿಗೆ ಸೋಮವಾರ ಶಾಸಕ ವೆಂಕಟರವಣಪ್ಪ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕುಂಟೆಗೆ ತಡೆಗೋಡೆ ನಿರ್ಮಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆಯಿಂದ ₹ 40 ಲಕ್ಷ ಅನುದಾನ ಮಂಜೂರಾಗಿದೆ. ಮಳೆಗಾಲದಲ್ಲಿ ಮಳೆ ನೀರು ಕುಂಟೆಗೆ ಸರಾಗವಾಗಿ ನೀರು ಹರಿದು ಬರಲು ಅನುಕೂಲವಾಗುವಂತೆ ₹ 15 ಲಕ್ಷ ವೆಚ್ಚದಲ್ಲಿ ಫೀಡರ್ ಚಾನೆಲ್ ಮಂಜೂರಾಗಿದೆ ಎಂದು ತಿಳಿಸಿದರು.
ಅಗಸರ ಕುಂಟೆ ಅಭಿವೃದ್ಧಿಪಡಿಸುವ ಸಲುವಾಗಿ ಹಂತ ಹಂತವಾಗಿ ಕಾಮಗಾರಿ ಆರಂಭಿಸಲಾಗುತ್ತಿದೆ. ಕಾಮಗಾರಿ ಮುಕ್ತಾಯವಾದ ಮೇಲೆ ವಾರಾಂತ್ಯದ ದಿನಗಳಲ್ಲಿ ಜನತೆಯ ಮನರಂಜನೆ ದೃಷ್ಟಿಯಿಂದ ಬೋಟಿಂಗ್ ವ್ಯವಸ್ಥೆ ಮಾಡಿಸಲಾಗುವುದು. ಕಣಿವೆ ಬಳಿ ಆರಂಭವಾಗಿರುವ ಸಾಲುಮರದ ತಿಮ್ಮಕ್ಕ ಉದ್ಯಾನದಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ಇಲಾಖೆಗೆ ಆದಾಯವೂ ಬರುತ್ತಿದೆ ಎಂದರು.
ಕುಂಟೆಗೆ ನಾಗಲಮಡಿಕೆಯಿಂದ ನೀರು ಹರಿಸಿರುವುದರಿಂದ ಪಟ್ಟಣದ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಿತ್ತು. ಈ ಬಾರಿ ಕೊಳವೆಬಾವಿಗಳಲ್ಲಿ ನೀರಿರುವುದರಿಂದ ಬೇಸಿಗೆಯಲ್ಲಿಯೂ ನೀರಿನ ಅಭಾವವಿಲ್ಲ ಎಂದು ತಿಳಿಸಿದರು.