ತುಮಕೂರು: ‘ನಾವು ಕನ್ನಡಿಗರು. ಕನ್ನಡಾಭಿಮಾನಿಗಳು. ನಮ್ಮ ಭಾಷೆಯ ಮೇಲೆ ಪ್ರಹಾರ ಮಾಡಿದರೆ ಸುಮ್ಮನೆ ಇರುವುದಿಲ್ಲ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶಕ್ಕೆ ಒಂದೇ ಭಾಷೆ ಇದ್ದರೆ ಒಳ್ಳೆಯದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆಯೇ ಹೊರತು ಪ್ರಾದೇಶಿಕ ಭಾಷೆಗಳು ಬೇಡ ಎಂದಿಲ್ಲ. ಪ್ರಾದೇಶಿಕ ಭಾಷೆಗಳನ್ನು ಬೆಳೆಸಿ ಎಂದು ಶಾ ಹೇಳಿದ್ದಾರೆ’ ಎಂದರು.
‘ಸಂಚಾರ ನಿಯಮಗಳ ಉಲ್ಲಂಘನೆಯ ದಂಡದ ಪ್ರಮಾಣ ಹೆಚ್ಚಳಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಯಿತು. ಅವರ ಅಭಿಪ್ರಾಯಕ್ಕೆ ಮನ್ನಣೆ ಕೊಡಲೇಬೇಕು. ಹೀಗಾಗಿ ಹಳೇ ನಿಯಮದ ಪ್ರಕಾರವೇ ದಂಡ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಹೆಚ್ಚು ದಂಡ ನಿಗದಿಮಾಡುವುದು ಎಲ್ಲೊ ಒಂದು ಕಡೆ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದರು.
ಮಧ್ಯಂತರ ಚುನಾವಣೆ ಬರುತ್ತದೆ. ಚುನಾವಣೆಗೆ ಸಿದ್ಧರಾಗುತ್ತೇವೆ ಎಂದು ವಿರೋಧ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ವ್ಯಂಗ್ಯವಾಡಿದರು.