ತುರುವೇಕೆರೆ: ಹಾಲು ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಜಿಲ್ಲಾ ಕೇಂದ್ರದಲ್ಲಿ ಹೆಣ್ಣು ಮಕ್ಕಳ ಉಚಿತ ವಿದ್ಯಾರ್ಥಿ ನಿಲಯ ತೆರೆಯಲಾಗಿದೆ ಎಂದು ತುಮಕೂರು ಹಾಲು ಒಕ್ಕೂಟ (ತುಮುಲ್) ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಅಮ್ಮಸಂದ್ರ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಾಸುಗಳ ವಿಮೆಗಾಗಿ₹ 6 ಕೋಟಿಯನ್ನು ತುಮುಲ್ ಮೀಸಲಿರಿಸಿದೆ. ಹೈನುಗಾರ ರೈತರ ಹಿತ ಕಾಯಲು ತುಮುಲ್ ಬದ್ಧವಾಗಿದೆ. ಹಾಲು ಉತ್ಪಾದಕರ ಸಂಘಗಳಿಗೆ ಕಟ್ಟಡವನ್ನು ಒದಗಿಸುವಲ್ಲಿ ತುಮುಲ್ ಯಶಸ್ವಿ ಹೆಜ್ಜೆ ಇರಿಸಿದೆ ಎಂದು ಹೇಳಿದರು.
ಉತ್ಪಾದಕರು ಗುಣಮಟ್ಟದ ಹಾಲನ್ನು ಸ್ವೀಕರಣಾ ಕೇಂದ್ರಗಳಿಗೆ ನೀಡುವ ಮೂಲಕ ತುಮುಲ್ ಏಳಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಹೈನುಗಾರಿಕೆ ಗ್ರಾಮೀಣ ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಆಗಿದೆ. ತುಮುಲ್ ಹೈನುಗಾರರಿಗಾಗಿ ಹತ್ತು ಹಲವು ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ರೈತರು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷೆ ಎ.ಎಸ್.ಪ್ರೇಮಾ ಬಸವರಾಜು, ಗ್ರಾ.ಪಂ ಅಧ್ಯಕ್ಷೆ ತಾರಾಮಣಿ ಧನಂಜಯ, ಜೆಡಿಎಸ್ ಮುಖಂಡರಾದ ಕೆ.ಸಿದ್ದಗಂಗಯ್ಯ, ಶಿವರಾಜ್, ವಿಸ್ತರಣಾಧಿಕಾರಿಗಳಾದ ಕೆ.ಪಿ.ಮಂಜುನಾಥ್, ಎನ್.ಕಿರಣ್ಕುಮಾರ್, ದಿವಾಕರ್, ಕಾರ್ಯದರ್ಶಿ ಉಮಾ ತೀರ್ಥಯ್ಯ ಹಾಗೂ ಸಂಘದ ನಿರ್ದೇಶಕರು ಇದ್ದರು.