ಕೊರಟಗೆರೆ (ತುಮಕೂರು ಜಿಲ್ಲೆ): ಕೌಟುಂಬಿಕ ಕಲಹದ ಕಾರಣ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಪ್ರಕರಣ ಪಟ್ಟಣದಲ್ಲಿ ಗುರುವಾರ ನಡೆದಿದೆ.
ಇಲ್ಲಿನ ರೇಣುಕಾ ಆಸ್ಪತ್ರೆ ಹಿಂಭಾಗದಲ್ಲಿ ವಾಸವಾಗಿರುವ ಜಬೀನಾ (40) ಅವರನ್ನು ಅವರ ಪತಿ ಚಾಂದ್ ಪಾಷ ಹತ್ಯೆಗೈದಿದ್ದಾರೆ.
ಜಬೀನಾ ಮತ್ತು ಮಗ ಮಹಮ್ಮದ್ ಅಲಿ (12) ನಿದ್ದೆಯಲ್ಲಿ ಇದ್ದರು. ಚಾಂದ್ ಪಾಷ ದೊಣ್ಣೆಯಿಂದ ಇಬ್ಬರ ತಲೆಗೆ ಬಲವಾಗಿ ಹೊಡೆದಿದ್ದಾರೆ.
ಸ್ಥಳದಲ್ಲಿಯೇ ರಕ್ತಸ್ರಾವವಾಗಿ ಜಬೀನಾ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಮಹಮದ್ ಅಲಿಯನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಅಲಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. ಸಿಪಿಐ ಎಫ್.ಕೆ.ನಧಾಪ್ ಮತ್ತು ಪಿಎಸೈ ಎಚ್.ಮುತ್ತುರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.