ಚಿಕ್ಕನಾಯಕನಹಳ್ಳಿ: ಇಂದಿರಾ ಕ್ಯಾಂಟೀನ್ ಪಟ್ಟಣದ ಹೃದಯಭಾಗದಲ್ಲೇ ಇದ್ದರೂ ಸಾರ್ವಜನಿಕರಿಗೆ ಕಾಣದಂತಾಗಿದೆ!
ಇಂದಿರಾ ಕ್ಯಾಂಟೀನ್ ಮುಖ್ಯರಸ್ತೆಯಿಂದ 50 ಅಡಿ ಒಳಭಾಗಕ್ಕಿದೆ. ಮುಖ್ಯರಸ್ತೆಗೆ ಬ್ಯಾಂಕ್ನ ಬೃಹತ್ ಕಟ್ಟಡವಿದೆ. ಅದರ ಹಿಂಬದಿಗೆ ಮರೆ ಮಾಡಿದಂತೆ ಇಂದಿರಾ ಕ್ಯಾಂಟೀನ್ ಇದೆ. ಪರ ಊರುಗಳಿಂದ ಬರುವ ಯಾರಿಗೂ ಇಲ್ಲಿ ಇಂದಿರಾ ಕ್ಯಾಂಟೀನ್ ಎಲ್ಲಿದೆ ಎನ್ನುವುದೇ ಸಿಗುವುದಿಲ್ಲ. ಅವರು ಸ್ಥಳೀಯರ ಬಳಿ ಕೇಳಿ ಕ್ಯಾಂಟೀನ್ ವಿಳಾಸ ಹುಡುಕುವುದು ಅನಿವಾರ್ಯ.
ಪ್ರಾರಂಭದಲ್ಲಿ ಮುಖ್ಯರಸ್ತೆ ಬದಿಗೆ ಇಂದಿರಾ ಕ್ಯಾಂಟೀನ್ ಎಂಬ ದೊಡ್ಡ ಬೋರ್ಡ್ ಇತ್ತು. ನಂತರ ರಸ್ತೆ ವಿಸ್ತರಣೆ ಕಾಮಗಾರಿ ಮಾಡುವಾಗ ಕ್ಯಾಂಟೀನ್ ಬೋರ್ಡ್ ಕಿತ್ತು ಎಸ್ಬಿಐ ಕಟ್ಟಡದ ಒಂದು ಪಾರ್ಶ್ವಕ್ಕೆ ಆನಿಸಲಾಗಿದೆ. ಅದು ಈಗಲೂ ವರ್ಷಗಳಿಂದ ಅಲ್ಲೇ ಹಾಗೆಯೇ ಆನಿಕೊಂಡಿದೆ. ಈಗ ಬೋರ್ಡ್ ಸಂಪೂರ್ಣ ಕಿತ್ತುಹೋಗಿದೆ. ಕಬ್ಬಿಣದ ಫ್ರೇಮ್ ತುಕ್ಕು ಹಿಡಿದಿದೆ. ಹಸಿದವರಿಗೆ ಇಂದಿರಾ ಕ್ಯಾಂಟೀನ್ ವಿಳಾಸ ಸಿಗದಂತಾಗಿದೆ.
ರಸ್ತೆ ವಿಸ್ತರಣೆ ಕಾಮಗಾರಿ ಮುಗಿದು ವರ್ಷಗಳೇ ಕಳೆದಿವೆ. ಇಂದಿರಾ ಕ್ಯಾಂಟೀನ್ ಬೋರ್ಡ್ ಮತ್ತೆ ಎದ್ದು ನಿಲ್ಲುವ ಭಾಗ್ಯ ಇನ್ನೂ ಸಿಕ್ಕಿಲ್ಲ. ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿಲ್ಲ. ಪ್ರಶ್ನಿಸಿದರೆ ಅಧಿಕಾರಿಗಳು ನೀತಿ ಸಂಹಿತೆಯ ನೆಪ ಹೇಳುತ್ತಾರೆ ಎನ್ನುತ್ತಾರೆ ಸಾರ್ವಜನಿಕರು.
ಯುಜಿಡಿ ಅವಾಂತರ: ಒಳಚರಂಡಿಗಾಗಿ ಪಟ್ಟಣದ ಬೀದಿ ಬದಿ ಅಗೆಯಲಾಗಿದೆ. ಇಕ್ಕೆಲಗಳಲ್ಲಿ ಮಣ್ಣು ಕಸಿಯುವ ಆತಂಕ ಎದುರಾಗಿದೆ. ಬೈಕ್, ಕಾರು, ಲಾರಿಗಳು ಓಡಾಡುವ ಈ ಬೀದಿ ರಸ್ತೆಗಳಲ್ಲಿ ಜನ ಓಡಾಡಲು ಭಯ ಪಡುವಂತಾಗಿದೆ.
ಮೊಟ್ಟಮೊದಲ ಮಹಿಳಾ ಪ್ರಧಾನಿಯವರ ಹೆಸರೇ ಮಸುಕಾಗಿ ಹಾಳಾಗಿರುವ ಬೋರ್ಡು
ಇಂದಿರಾ ಕ್ಯಾಂಟೀನ್ ಕಟ್ಟಡದ ಎದುರಿಗೇ ಇರುವ ಯೂಜಿಡಿ ಗಂಡಾಂತರ