ತುಮಕೂರು: ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ಶನಿವಾರ ನಡೆದ ಖಾಸಗಿ ಬಸ್ ಅಪಘಾತದಲ್ಲಿ ಗಾಯಗೊಂಡ 26 ಜನರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಇದರಲ್ಲಿ 10 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ.
16 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಾಲಕನಿಗೆ ನಿಧಾನವಾಗಿ ಬಸ್ ಚಲಾಯಿಸುವಂತೆ ಕೂಗಿಕೊಂಡರೂ ಕೇಳಿಸಿಕೊಳ್ಳುತ್ತಿರಲಿಲ್ಲ. ಆಗೊಮ್ಮೆ, ಹೀಗೊಮ್ಮೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಅಪಘಾತದಲ್ಲಿ ಗಾಯಗೊಂಡ ವೈ.ಎನ್.ಹೊಸಕೋಟೆಯ ನಿವಾಸಿ ಮಾರಪ್ಪ ಹೇಳಿದರು.
‘ಬಸ್ನಲ್ಲಿ ಸುಮಾರು 70 ರಿಂದ 80 ಜನ ಪ್ರಯಾಣಿಕರಿದ್ದರು. ಬಸ್ನ ಮೇಲ್ಭಾಗದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕೂತಿದ್ದರು. ಬಸ್ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಪಾವಗಡದಿಂದ ಸರಿಯಾದ ಸಮಯಕ್ಕೆ ಸರ್ಕಾರಿ ಬಸ್ಗಳಿಲ್ಲ. ಹಾಗಾಗಿ ಎಲ್ಲರು ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಾರೆ’ ಎಂದರು.
ಎರಡರಿಂದ ಮೂರು ಗಂಟೆಗೊಮ್ಮೆ ಸರ್ಕಾರಿ ಬಸ್ಗಳು ಬರುತ್ತವೆ. ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹೋಗಬೇಕು ಎಂಬ ಉದ್ದೇಶದಿಂದ ಬಸ್ ತುಂಬಿದ್ದರೂ ಕೂಡ ಅನಿವಾರ್ಯವಾಗಿ ಅದರಲ್ಲಿಯೇ ಹತ್ತಿಕೊಂಡು ಹೋಗುತ್ತಾರೆ ಎಂದೂ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು.