ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನಹಳ್ಳಿಯಲ್ಲಿ ಹಳ್ಳಿಕಾರ್ ಮಠದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹಸಿರು ನಿಶಾನೆ ದೊರೆತಿದೆ ಎಂದು ಮಠದ ಟ್ರಸ್ಟ್ ಅಧ್ಯಕ್ಷ ನಾಗಯ್ಯ ತಿಳಿಸಿದರು.
ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿಯ ಹಳ್ಳಿಕಾರ್ ಮಠದ ಆವರಣದಲ್ಲಿ ಬೇವು, ಅರಳಿ, ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಮಠದ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮಠವು ಹಳ್ಳೀಕಾರ್ ಸಮುದಾಯದ ಶಕ್ತಿ ಪೀಠವಾಗಿದ್ದು, ಸಮಾನ ಮನಸ್ಕರ ಒತ್ತಾಸೆಯಂತೆ ಮಠ ಸ್ಥಾಪಿಸುವ ಸಂಕಲ್ಪ ಮಾಡಲಾಗಿತ್ತು. ಕೋವಿಡ್ನಿಂದಾಗಿ ಇದು ವಿಳಂಬವಾಗಿತ್ತು ಎಂದರು.
ಮಠವು ಹಳ್ಳಿಕಾರ್ ಸಮುದಾಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಮಹತ್ವಾಕಾಂಕ್ಷೆ ಹೊಂದಿದೆ. ಈ ನಿಟ್ಟಿನಲ್ಲಿ ಹಳ್ಳೀಕಾರ್ ಮಠದ ಆಸುಪಾಸಿನಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಆಶಯ ಹೊಂದಿದೆ ಎಂದರು.
ಈಗಾಗಲೇ 1 ಕೋಟಿ ವೆಚ್ಚದಲ್ಲಿ ಮಠದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಮಠದ ಪದಾಧಿಕಾರಿಗಳಾದ ದಯಾನಂದ್, ಪಟೇಲ್ ಪಾಂಡು, ಬೆಟ್ಟಸ್ವಾಮಿ, ಪುಟ್ಟೇಗೌಡ, ಸಣ್ಣಯ್ಯ, ವೀರತಯ್ಯ, ರಮೇಶ್, ರಂಗಶ್ರೀ, ಕುನ್ನಯ್ಯ, ಮೂರ್ತಿ ಇದ್ದರು.