ತುಮಕೂರು: ದೇಶ ಬಲಿಷ್ಠ ಮಾಡುವುದಾಗಿ ಅಧಿಕಾರಕ್ಕೆ ಬಂದವರಿಂದ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ. ಶ್ರೀಮಂತರು ಮಾತ್ರ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಪಿಐಎಂ ರಾಜ್ಯ ಮುಖಂಡ ಮೀನಾಕ್ಷಿ ಸುಂದರಂ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) 17ನೇ ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಎಲ್ಲವೂ ಮಾರಾಟವಾಗುತ್ತಿದೆ. ಕಪ್ಪುಹಣ ವಾಪಸ್ ತರುವುದಾಗಿ ಹೇಳಿದ್ದ ಪ್ರಧಾನಿ ಜನರ ಮೇಲೆ ತೆರಿಗೆ ವಿಧಿಸುತ್ತಿದ್ದಾರೆ. ಪಿಂಚಣಿ, ಸಂಬಳ ನೀಡಲು ಹಣ ಇಲ್ಲ ಎನ್ನುವ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗಳ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದೆ.ದೇಶದ ಜನರು ಬಡವಾಗುತ್ತಿರುವಾಗ ಕೆಲವರು ಮಾತ್ರ ಜಗತ್ತಿನ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಲೇವಡಿ ಮಾಡಿದರು.
‘ಭೂಮಿಯ ಫಲವತ್ತತೆ ಜಾಸ್ತಿಯಾಗದೇ ಅಭಿವೃದ್ಧಿ ಸಾಧ್ಯವಿಲ್ಲ. ಕಳೆದ ಮೂವತ್ತು ವರ್ಷಗಳಿಂದ ಜಿಲ್ಲೆಗೆ ಹೇಮಾವತಿ ನೀರು ಬರಲಿಲ್ಲ. ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಎಲ್ಲ ತಾಲ್ಲೂಕುಗಳ ಕೆರೆಗಳಿಗೆ, ಕೃಷಿಗೆ ನೀರು ಕೊಡಬೇಕು’ ಎಂದು ರಾಜ್ಯಮುಖಂಡ ಗೋಪಾಲಕೃಷ್ಣ ಅರಳಹಳ್ಳಿ ಒತ್ತಾಯಿಸಿದರು.
ಪ್ರತಿದಿನ ಕಾರ್ಖಾನೆಗಳು ಮುಚ್ಚುತ್ತಿರುವುದರಿಂದ ದುಡಿಯುವ ಕೈಗಳಿಗೆ ದುಡಿಮೆ ಇಲ್ಲದಂತಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸೈಯದ್ ಮುಜೀಬ್ ಕಳವಳ ವ್ಯಕ್ತಪಡಿಸಿದರು. ಎನ್.ಕೆ. ಸುಬ್ರಮಣ್ಯ, ಬಿ. ಉಮೇಶ್. ಸಿ. ಅಜ್ಜಪ್ಪ, ಎ.ಲೋಕೇಶ್ ಶಹತಾಜ್, ಷಣ್ಮುಗಪ್ಪ, ಗಿರೀಶ್ ಭಾಗವಹಿಸಿದ್ದರು.