ತುರುವೇಕೆರೆ: ಹೇಮಾವತಿ ಜಲಾಶಯದಿಂದ ನಾಗಮಂಗಲ ಶಾಖಾ ನಾಲೆಯ ಮೂಲಕ ದಬ್ಬೇಘಟ್ಟ ಮತ್ತು ಮಾಯಸಂದ್ರ ಹೋಬಳಿಗೆ ಕುಡಿಯುವ ನೀರು ಹರಿಸುವಂತೆ ಒತ್ತಾಯಿಸಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ತಲೆಯ ಮೇಲೆ ಖಾಲಿ ಕೊಡ ಹೊತ್ತು ಹೇಮಾವತಿ ಕಚೇರಿವರೆಗೆ ನಡೆದರು.
‘ಬೇಕೇ ಬೇಕು ಹೇಮಾವತಿ ನೀರು’, ‘ಉಳಿಸಿ ಉಳಿಸಿ ರೈತರ ಉಳಿಸಿ’ ಎಂದು ಘೋಷಣೆ ಕೂಗಿದರು.
ಕುಡಿಯುವ ನೀರಿಗೆ ತತ್ವಾರವಿರುವ ದಬ್ಬೇಘಟ್ಟ ಹೋಬಳಿ ಮತ್ತು ಮಾಯಸಂದ್ರ ಹೋಬಳಿಯ ಕೆರೆ ಕಟ್ಟೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.
‘ತುಮಕೂರು ಶಾಖಾ ನಾಲೆಗೆ ಮಾತ್ರ ನೀರು ಬಿಡಲಾಗಿದೆ. ನಾಗಮಂಗಲ ಶಾಖಾ ನಾಲೆಗೆ ಏಕೆ ನೀರು ಬಿಡುತ್ತಿಲ್ಲ. ಇಲ್ಲಿಯ ಜನರು ಬದುಕುವುದು ಬೇಡವೇ?’ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಮಾವತಿ ಇಲಾಖಾ ಅಧೀಕ್ಷಕಿ ಸುವರ್ಣ ಅವರನ್ನು ಪ್ರಶ್ನಿಸಿದರು.
ಮೂರ್ನಾಲ್ಕು ದಿನಗಳಲ್ಲಿ ಹೇಮಾವತಿ ನೀರನ್ನು ನಾಗಮಂಗಲ ಶಾಖಾ ನಾಲೆಗೆ ಹರಿಸದಿದ್ದಲ್ಲಿ ಹೇಮಾವತಿ ಇಲಾಖೆ ಕಚೇರಿ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದರು.
ಕಚೇರಿಯ ಗೇಟ್ ಮುಂಭಾಗವೇ ಪ್ರತಿಭಟನಕಾರರನ್ನು ಪೊಲೀಸರು ತಡೆದರು.
ಹೇಮಾವತಿ ಇಲಾಖೆಯ ಎಸ್ಇ ಸುವರ್ಣ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿಂದಿ ಮತ್ತು ಶ್ರೀನಿವಾಸ್, ಸಹಾಯಕ ಎಂಜಿಯರ್ ಶಿವಪ್ರಸಾದ್ ಸ್ಥಳಕ್ಕೆ ಬಂದು ಅಹವಾಲು ಆಲಿಸಿದರು.
ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡೇಗೌಡ, ಮಂಗೀಕುಪ್ಪೆ ಬಸವರಾಜು, ಹೇಮಚಂದ್ರು, ಹರೀಶ್, ಸೋಮಣ್ಣ, ಲೀಲಾವತಿ, ವೆಂಕಟೇಶ್, ಕೃಷ್ಣಪ್ಪ, ಬಿ.ಎಸ್.ದೇವರಾಜ್, ರಾಜು, ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.