ತುಮಕೂರು: ಮಹಾನಗರ ಪಾಲಿಕೆಯಿಂದ ಡಿ. 8ರಂದು ಬೆಳಿಗ್ಗೆ 9.30 ಗಂಟೆಗೆ ಪಾಲಿಕೆಯ ಕಚೇರಿ ಆವರಣದಲ್ಲಿ ‘ತ್ವರಿತ ಸೇವೆ ಅದಾಲತ್’ ಹಮ್ಮಿಕೊಳ್ಳಲಾಗಿದೆ.
ನಗರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಸಣ್ಣಪುಟ್ಟ ಕೆಲಸಗಳನ್ನು ಸ್ಥಳದಲ್ಲೇ ಮಾಡಿಕೊಡಲು, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಅದಾಲತ್ ನಡೆಸಬೇಕು ಎಂದು ಪಾಲಿಕೆ ಸಭೆಯಲ್ಲಿ ಸದಸ್ಯರು ಒತ್ತಾಯಿಸುತ್ತಾ ಬಂದಿದ್ದರು. ಶೀಘ್ರದಲ್ಲೇ ಅದಾಲತ್ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಕೊನೆಗೂ ಶುಕ್ರವಾರ ಅದಾಲತ್ಗೆ ಮುಹೂರ್ತ ಕೂಡಿ ಬಂದಿದೆ.
ನಮೂನೆ-2, ನಮೂನೆ -3ರಲ್ಲಿ ಆಸ್ತಿಗಳ ಅಳತೆಯ ಅದಲು-ಬದಲು, ಹೆಸರು, ವಿಳಾಸ ತಿದ್ದುಪಡಿ, ಅನಧಿಕೃತ ಯುಜಿಡಿ, ನೀರು ಸಂಪರ್ಕಗಳನ್ನು ಅಧಿಕೃತಗೊಳಿಸುವುದು ಮತ್ತು ಪಿಐಡಿ ಸಂಖ್ಯೆ ಜೋಡಣೆ, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಸ್ಥಳಾಂತರ, ತಿದ್ದುಪಡಿಗೆ ಈ ಸಂದರ್ಭದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಜನನ ಮರಣ ಪ್ರಮಾಣ ಪತ್ರಗಳಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಇತರೆ ಸೇವೆಗಳಿಗಾಗಿ ತ್ವರಿತ ಸೇವೆ ಅದಾಲತ್ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮನವಿ ಮಾಡಿದ್ದಾರೆ.