ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಪ್ರಜಾ ರಾಜಕೀಯ ಪರಿವರ್ತನಾ ಯಾತ್ರೆ

ಕರ್ನಾಟಕ ರಾಷ್ಟ್ರ ಸಮಿತಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಎಸ್.ಮಲ್ಲಿಕಾರ್ಜುನಯ್ಯ ಹೇಳಿಕೆ
Last Updated 4 ಜೂನ್ 2019, 20:24 IST
ಅಕ್ಷರ ಗಾತ್ರ

ತುಮಕೂರು: ಪ್ರಜಾ ರಾಜಕೀಯ ಪರಿವರ್ತನಾ ಯಾತ್ರೆಯನ್ನು ಏಪ್ರಿಲ್ 3ರಿಂದ 9ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಎಸ್.ಮಲ್ಲಿಕಾರ್ಜುನಯ್ಯ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಲ್ಪತರು ನಾಡು, ಸಿರಿಧಾನ್ಯಗಳ ಬೀಡಿನ ಜಲ, ಜನ ಸಮೃದ್ಧಿಗಾಗಿ ರಾಜಕೀಯ ಆಂದೋಲನವಾಗಿ ಈ ಪರಿವರ್ತನಾ ಯಾತ್ರೆ ನಡೆಯುತ್ತಿದೆ. 7 ದಿನಗಳಲ್ಲಿ ಒಟ್ಟು 550 ಕಿ.ಮೀ ವ್ಯಾಪ್ತಿ ಸಂಚರಿಸಲಿದೆ. ಲೋಕಸಭಾ ಕ್ಷೇತ್ರದ ಹೋಬಳಿ, ತಾಲ್ಲೂಕು ಕೇಂದ್ರಗಳನ್ನು ತಲುಪಲಿದೆ’ ಎಂದು ವಿವರಿಸಿದರು.

ಹಣ, ಹೆಂಡ, ಆಮಿಷ, ಜಾತಿ, ಧರ್ಮ, ಕುಟುಂಬದ ಹೆಸರಿನಲ್ಲಿ ಇಲ್ಲಿಯವರೆಗೆ ಜನರನ್ನು ಭ್ರಮಾಲೋಕಕ್ಕೆ ತಳ್ಳಿ ಜನಾಧಿಕಾರ ಪಡೆದು ಕಲ್ಪತರು ನಾಡಾಗಿರುವ ತುಮಕೂರು ಜಿಲ್ಲೆಯನ್ನು ಬರದ ಬೆಂಗಾಡು ಮಾಡಲಾಗಿದೆ. ಚುನಾವಣೆಗೋಸ್ಕರ ನೀರಿನ ಕೆಸರೆರಚಾಟದ ಹೊಲಸು ರಾಜಕಾರಣಿಗಳ ಬಣ್ಣವನ್ನು ಈ ಇಡೀ ಯಾತ್ರೆಯಲ್ಲಿ ಬಯಲು ಮಾಡುತ್ತೇವೆ ಎಂದು ಹೇಳಿದರು.

ಕಲುಷಿತ ರಾಜಕಾರಣದ ಶುದ್ಧೀಕರಣ ಪ್ರಕ್ರಿಯೆಯನ್ನು ಜನಸಾಮಾನ್ಯರೊಂದಿಗೆ ಆರಂಭಿಸುವ ಧ್ಯೇಯದೊಂದಿಗೆ ಜನರಿಂದಲೇ ಚುನಾವಣಾ ವೆಚ್ಚಕ್ಕಾಗಿ ದೇಣಿಗೆ ಸಂಗ್ರಹಿಸಲಾಗುತ್ತದೆ. ದೇಣಿಗೆ ಸಂಗ್ರಹಿಸುತ್ತಲೇ ಕ್ಷೇತ್ರ ಪರಿಕ್ರಮಕ್ಕಾಗಿ ಚುನಾವಣಾ ಪ್ರಚಾರ ನಡೆಸಲಾಗುವುದು ಎಂದು ವಿವರಿಸಿದರು.

ಯಾತ್ರೆ ಸಾಗುವ ಮಾರ್ಗ: ಏ.3ರಂದು ಯಾತ್ರೆಯು ಮಧುಗಿರಿ ತಾಲ್ಲೂಕು ದೊಡ್ಡದಾಳವಟ್ಟ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಆರಂಭವಾಗಲಿದೆ. ಕೊಡಿಗೇನಹಳ್ಳಿ, ಪುರುವರ, ಹೊಳವನಹಳ್ಳಿ, ಕೊಳಾಲ ಊರ್ಡಿಗೆರೆ ಮತ್ತು ಗೂಳೂರಲ್ಲಿ ಸಂಚರಿಸಲಿದೆ. ಏ.4ರಂದು ಹೆಬ್ಬೂರು, ಸಿ.ಎಸ್.ಪುರ, ಕಡಬ, ಮಾಯಸಂದ್ರ, ದಬ್ಬೆಘಟ್ಟ, ಏ.5ರಂದು ತುರುವೇಕೆರೆ, ನೊಣವಿನಕೆರೆ, ತಿಪಟೂರು, ಹೊನ್ನವಳ್ಳಿ, ಏ.6ರಂದು ತಿಪಟೂರು, ಹಾಲುಕುರಿಕೆ, ಮತ್ತಿಘಟ್ಟ, ಹಂದನಕೆರೆ, ಹುಳಿಯಾರಿನಲ್ಲಿ ವಾಸ್ತವ್ಯ ಮಾಡುವರು ಎಂದು ಹೇಳಿದರು.

ಏ.7ರಂದು ಕಂದಿಕೆರೆ, ಬುಕ್ಕಾಪಟ್ಟಣ, ಹಾಗಲವಾಡಿ, ಏ.8ರಂದು ಚೇಳೂರು, ಬೆಳ್ಳಾವಿ, ಕೋರ, ಸಿದ್ಧರಬೆಟ್ಟ, ಏ.9ರಂದು ಚನ್ನರಾಯನದುರ್ಗ, ಕೊರಟಗೆರೆ, ದೊಡ್ಡೇರಿ, ಮಿಡಿಗೇಶಿ, ಐ.ಟಿ.ಹಳ್ಳಿ, ದೊಡ್ಡದೊಳವಟ್ಟಿಯಲ್ಲಿ ಸಂಚರಿಸಲಾಗಿದೆ ಎಂದು ವಿವರಿಸಿದರು.

ಯುವ ಸಮುದಾಯ ಮುಂದೆ ಬರಲಿ: 80–90 ವರ್ಷಗಳಾದವರು, ಮೂರ್ನಾಲ್ಕು ಬಾರಿ ಸಂಸದರಾದರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ದೇಶದ ಶೇ 50ರಷ್ಟಿರುವ ಯುವ ಸಮುದಾಯ ಚುನಾವಣಾ ಕಣಕ್ಕೆ ಮುಂದಾಗಬೇಕಾದ ಸಂದರ್ಭ ಬಂದಿದೆ. ಈ ಹೊಲಸು ರಾಜಕೀಯ ವ್ಯವಸ್ಥೆಯನ್ನು ನಾವೇ ಸರಿಪಡಿಸಬೇಕಾಗಿದೆ. ಇದಕ್ಕಾಗಿ ಯುವ ಸಮುದಾಯ ರಾಜಕೀಯ ಕ್ಷೇತ್ರ ಪ್ರವೇಶಿಸಬೇಕು ಎಂದು ಮಲ್ಲಿಕಾರ್ಜುನಯ್ಯ ಮನವಿ ಮಾಡಿದರು.

ಕರ್ನಾಟಕ ರಾಷ್ಟ್ರ ಸಮಿತಿ ಧ್ಯೇಯ ಮತ್ತು ಸಿದ್ಧಾಂತಗಳಾದ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದಲ್ಲಿ ವಿಶ್ವಾಸ ಇಟ್ಟಿರುವ ನಾಡಿನ ಭಾಷೆ, ನೆಲ, ಜಲ ರಕ್ಷಿಸಲು ಬಯಸುವ ಜನರು ಮತ್ತು ನಾಯಕರು ನಮ್ಮ ಪಕ್ಷ ಸೇರಬೇಕು. ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ವತಿಯಿಂದ ವಿಧಾನಸಭಾ, ನಗರಸಭೆ, ನಗರಪಾಲಿಕೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸ ಬಯಸುವವರು ಸಂಪರ್ಕಿಸಬಹುದು ಎಂದು ಹೇಳಿದರು.

ಬಿ.ಸಿ.ಮಲ್ಲಿಕಾರ್ಜುನಯ್ಯ, ಯತಿರಾಜ್, ನಾಗಭೂಷಣ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT