<p><strong>ತುಮಕೂರು:</strong> ಶಿಕ್ಷಕರು ಮಕ್ಕಳ ಬಗ್ಗೆ ಸಹಾನುಭೂತಿಗೆ ಬದಲಾಗಿ ಅನುಭೂತಿ ಬೆಳೆಸಿಕೊಂಡಾಗ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ 27ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನಡೆದ ಶಿಕ್ಷಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>ಶಿಕ್ಷಣದಷ್ಟು ಅತ್ಯುನ್ನತ ಉತ್ಪಾದನಾ ಕ್ಷೇತ್ರ ಸಮಾಜದಲ್ಲಿ ಇನ್ನೊಂದಿಲ್ಲ. ಇದರ ಮಹತ್ವ ಅರಿತು ಶಿಕ್ಷಕರು ಮುನ್ನಡೆಯಬೇಕು. ಧ್ಯೇಯನಿಷ್ಠೆ, ಸಮರ್ಪಣಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.</p>.<p>ಇತ್ತೀಚೆಗೆ ರಾಜ್ಯದೆಲ್ಲೆಡೆ ಜಿಲ್ಲಾ ಪಂಚಾಯಿತಿ ಸಿಇಒ, ಡಿಡಿಪಿಐ, ಬಿಇಒಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಕೆಲವೆಡೆ ಸಿಇಒಗಳೇ ತರಗತಿಗಳಿಗೆ ಹೋಗಿ ಪಾಠ ಮಾಡುತ್ತಿದ್ದಾರೆ. ಈ ಬೆಳವಣಿಗೆ ನೋಡಿದರೆ ಪರೀಕ್ಷೆ ಬರೆಯುತ್ತಿರುವುದು ಮಕ್ಕಳೋ ಅಧಿಕಾರಿಗಳೊ ಎಂಬ ಅನುಮಾನ ಕಾಡುತ್ತಿದೆ. ಆದರೂ ಇದು ಆರೋಗ್ಯದಾಯಕ ಬೆಳವಣಿಗೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸರತಿ ಸಾಲಿನಲ್ಲಿ ನಿಂತು ಸೇರಿಸುವ ವಾತಾವರಣವನ್ನು ನಾವೆಲ್ಲರೂ ನಿರ್ಮಿಸೋಣ ಎಂದು ಆಶಿಸಿದರು.</p>.<p>‘ತುಮಕೂರಿಗೂ ನನಗೂ ವಿಶೇಷ ಸಂಬಂಧ ಇದೆ. ಈ ಹಿಂದೆ ಮೂರು ವರ್ಷ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 101ನೇ ಜನ್ಮದಿನೋತ್ಸವದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಇದೀಗ ಶಿಕ್ಷಣ ಸಚಿವನಾದ ಬಳಿಕ ಪಾವಗಡ ತಾಲ್ಲೂಕಿನ ಅಚ್ಚಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮೊದಲ ಬಾರಿ ಶಾಲಾ ವಾಸ್ತವ್ಯ ಮಾಡಿದೆ. ಹಾಗಾಗಿ ತುಮಕೂರಿನ ಸಂಬಂಧವನ್ನು ನಾನು ಎಂದಿಗೂ ಮರೆಯಲಾರೆ’ ಎಂದು ಹೇಳಿದರು.</p>.<p>ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ‘ಆಶ್ರಮವು 50 ವರ್ಷಗಳ ಹಿಂದೆಯೇ ಶಾಲೆಗಳನ್ನು ತೆರೆಯುವುದನ್ನು ಕೈಬಿಟ್ಟು ಸಮಾಜದಲ್ಲಿ ಇರುವ ಶಾಲೆಗಳೇ ನಮ್ಮ ಶಾಲೆಗಳು ಎಂದು ಭಾವಿಸಿದೆ. ನೈತಿಕವಾಗಿ ಮತ್ತು ಸಾಮಾಜಿಕವಾಗಿ ಶಿಕ್ಷಕರ ಮತ್ತು ಮಕ್ಕಳ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿದೆ. ಶಿಕ್ಷಕರು ಎಂದೂ ತಮ್ಮ ವೃತ್ತಿ ಬಗ್ಗೆ ಉತ್ಸಾಹ ಕಳೆದುಕೊಳ್ಳಬಾರದು ಎಂಬುದು ನಮ್ಮ ಉದ್ದೇಶ’ ಎಂದರು.</p>.<p>ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಕೆ.ವಿ.ಅನಸೂಯ, ‘ಅಧ್ಯಯನ, ಅಧ್ಯಾಪನ, ಮೌಲ್ಯಮಾಪನ ಶಿಕ್ಷಕರ ಮುಖ್ಯ ಕರ್ತವ್ಯ. ಈ ಕರ್ತವ್ಯದಲ್ಲಿ ಸ್ವಲ್ಪ ಲೋಪವಾದರೂ ಪರಿಣಾಮ ಭಯಾನಕ ಆಗಿರುತ್ತದೆ’ ಎಂದು ಹೇಳಿದರು.</p>.<p>ಶಿಕ್ಷಣ ತಜ್ಞ ಚಿದಾನಂದ ಎಂ.ಗೌಡ, ‘ಶಿಕ್ಷಕರು ಮಕ್ಕಳನ್ನು ಎಲ್ಲ ಆಯಾಮಗಳಲ್ಲೂ ತಿದ್ದಬೇಕು. ಒಬ್ಬ ಶಿಕ್ಷಕ ಒಂದು ಶಾಲೆಯ ಬದಲಾವಣೆಗೆ ಕಾರಣನಾದರೂ ಸದೃಢ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ’ ಎಂದರು.</p>.<p>ಬೆಂಗಳೂರಿನ ಬಸವನಗುಡಿ ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥಾನಂದ ಜೀ ಮಹಾರಾಜ್, ಶಾಸಕ ಬಿ.ಜಿ.ಜ್ಯೋತಿಗಣೇಶ್, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಬಿಇಒ ಸಿ.ರಂಗಧಾಮಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಶಿಕ್ಷಕರು ಮಕ್ಕಳ ಬಗ್ಗೆ ಸಹಾನುಭೂತಿಗೆ ಬದಲಾಗಿ ಅನುಭೂತಿ ಬೆಳೆಸಿಕೊಂಡಾಗ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ರಾಮಕೃಷ್ಣ ವಿವೇಕಾನಂದ ಆಶ್ರಮದ 27ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ನಡೆದ ಶಿಕ್ಷಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.</p>.<p>ಶಿಕ್ಷಣದಷ್ಟು ಅತ್ಯುನ್ನತ ಉತ್ಪಾದನಾ ಕ್ಷೇತ್ರ ಸಮಾಜದಲ್ಲಿ ಇನ್ನೊಂದಿಲ್ಲ. ಇದರ ಮಹತ್ವ ಅರಿತು ಶಿಕ್ಷಕರು ಮುನ್ನಡೆಯಬೇಕು. ಧ್ಯೇಯನಿಷ್ಠೆ, ಸಮರ್ಪಣಾ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.</p>.<p>ಇತ್ತೀಚೆಗೆ ರಾಜ್ಯದೆಲ್ಲೆಡೆ ಜಿಲ್ಲಾ ಪಂಚಾಯಿತಿ ಸಿಇಒ, ಡಿಡಿಪಿಐ, ಬಿಇಒಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಕೆಲವೆಡೆ ಸಿಇಒಗಳೇ ತರಗತಿಗಳಿಗೆ ಹೋಗಿ ಪಾಠ ಮಾಡುತ್ತಿದ್ದಾರೆ. ಈ ಬೆಳವಣಿಗೆ ನೋಡಿದರೆ ಪರೀಕ್ಷೆ ಬರೆಯುತ್ತಿರುವುದು ಮಕ್ಕಳೋ ಅಧಿಕಾರಿಗಳೊ ಎಂಬ ಅನುಮಾನ ಕಾಡುತ್ತಿದೆ. ಆದರೂ ಇದು ಆರೋಗ್ಯದಾಯಕ ಬೆಳವಣಿಗೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸರತಿ ಸಾಲಿನಲ್ಲಿ ನಿಂತು ಸೇರಿಸುವ ವಾತಾವರಣವನ್ನು ನಾವೆಲ್ಲರೂ ನಿರ್ಮಿಸೋಣ ಎಂದು ಆಶಿಸಿದರು.</p>.<p>‘ತುಮಕೂರಿಗೂ ನನಗೂ ವಿಶೇಷ ಸಂಬಂಧ ಇದೆ. ಈ ಹಿಂದೆ ಮೂರು ವರ್ಷ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ 101ನೇ ಜನ್ಮದಿನೋತ್ಸವದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ. ಇದೀಗ ಶಿಕ್ಷಣ ಸಚಿವನಾದ ಬಳಿಕ ಪಾವಗಡ ತಾಲ್ಲೂಕಿನ ಅಚ್ಚಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮೊದಲ ಬಾರಿ ಶಾಲಾ ವಾಸ್ತವ್ಯ ಮಾಡಿದೆ. ಹಾಗಾಗಿ ತುಮಕೂರಿನ ಸಂಬಂಧವನ್ನು ನಾನು ಎಂದಿಗೂ ಮರೆಯಲಾರೆ’ ಎಂದು ಹೇಳಿದರು.</p>.<p>ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಮಾತನಾಡಿ, ‘ಆಶ್ರಮವು 50 ವರ್ಷಗಳ ಹಿಂದೆಯೇ ಶಾಲೆಗಳನ್ನು ತೆರೆಯುವುದನ್ನು ಕೈಬಿಟ್ಟು ಸಮಾಜದಲ್ಲಿ ಇರುವ ಶಾಲೆಗಳೇ ನಮ್ಮ ಶಾಲೆಗಳು ಎಂದು ಭಾವಿಸಿದೆ. ನೈತಿಕವಾಗಿ ಮತ್ತು ಸಾಮಾಜಿಕವಾಗಿ ಶಿಕ್ಷಕರ ಮತ್ತು ಮಕ್ಕಳ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿದೆ. ಶಿಕ್ಷಕರು ಎಂದೂ ತಮ್ಮ ವೃತ್ತಿ ಬಗ್ಗೆ ಉತ್ಸಾಹ ಕಳೆದುಕೊಳ್ಳಬಾರದು ಎಂಬುದು ನಮ್ಮ ಉದ್ದೇಶ’ ಎಂದರು.</p>.<p>ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಕೆ.ವಿ.ಅನಸೂಯ, ‘ಅಧ್ಯಯನ, ಅಧ್ಯಾಪನ, ಮೌಲ್ಯಮಾಪನ ಶಿಕ್ಷಕರ ಮುಖ್ಯ ಕರ್ತವ್ಯ. ಈ ಕರ್ತವ್ಯದಲ್ಲಿ ಸ್ವಲ್ಪ ಲೋಪವಾದರೂ ಪರಿಣಾಮ ಭಯಾನಕ ಆಗಿರುತ್ತದೆ’ ಎಂದು ಹೇಳಿದರು.</p>.<p>ಶಿಕ್ಷಣ ತಜ್ಞ ಚಿದಾನಂದ ಎಂ.ಗೌಡ, ‘ಶಿಕ್ಷಕರು ಮಕ್ಕಳನ್ನು ಎಲ್ಲ ಆಯಾಮಗಳಲ್ಲೂ ತಿದ್ದಬೇಕು. ಒಬ್ಬ ಶಿಕ್ಷಕ ಒಂದು ಶಾಲೆಯ ಬದಲಾವಣೆಗೆ ಕಾರಣನಾದರೂ ಸದೃಢ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ’ ಎಂದರು.</p>.<p>ಬೆಂಗಳೂರಿನ ಬಸವನಗುಡಿ ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥಾನಂದ ಜೀ ಮಹಾರಾಜ್, ಶಾಸಕ ಬಿ.ಜಿ.ಜ್ಯೋತಿಗಣೇಶ್, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಬಿಇಒ ಸಿ.ರಂಗಧಾಮಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>