ಕುಣಿಗಲ್: ತಾಲ್ಲೂಕಿನ ರಂಗಸ್ವಾಮಿಬೆಟ್ಟದಲ್ಲಿ ಸಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ತಳಿಗೆ (ಮಾಂಸಾಹಾರ) ಎಡೆ ಪ್ರಸಾದ ಪದ್ಧತಿಗೆ ಆಡಳಿತ ಮಂಡಳಿಯ ವೆಂಕಟರಂಗಯ್ಯ ಮತ್ತು ಉಸ್ತುವಾರಿ ಮಂಜುನಾಥ ನಿಷೇಧ ಹೇರಿದ್ದು, ಮುಂದುವರಿಕೆಗೆ ಒತ್ತಾಯಿಸಿ ಭಕ್ತರು ಗ್ರೇಡ್ 2 ತಹಶೀಲ್ದಾರ್ ಯೋಗೀಶ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ವಿಜಯ ಸಂಜೀವಯ್ಯ ಮಾತನಾಡಿ, ತಾಲ್ಲೂಕಿನ ಮಡಿಕೆಹಳ್ಳಿ ಪಂಚಾಯಿತಿ ಬೆಟ್ಟದ ರಂಗನಾಥ ದೇವಸ್ಥಾನದ ಮೂಲ ವಂಶಸ್ಥರಾಗಿದ್ದು ಪೂರ್ವಜರು ದೇವಸ್ಥಾನ ನಿರ್ಮಿಸಿದ್ದಾರೆ. ತಾತ ಸಮೇರಾಯ ರಂಗಪ್ಪ ತಪಸ್ಸಿನಿಂದ ರಂಗನಾಥ ಸ್ವಾಮಿ ದೇವರು ನೆಲೆಸಿದ್ದಾರೆ. ನಂತರ ಸಮೇರಾಯ ರಂಗಪ್ಪ ನಿಧನದ ನಂತರ ಅವರ ಗದ್ದುಗೆಯನ್ನು ಸ್ವಾಮಿಯ ಪಾದದಲ್ಲಿ ನಿರ್ಮಿಸಲಾಗಿದೆ. ದಾಸ ಮನೆತನದವರಾದ ಕಾರಣ ಪೂರ್ವಜರ ಕಾಲದಿಂದಲೂ ಪೂಜಾ ವಿಧಾನದಲ್ಲಿ ತಳಿಗೆ (ಮಾಂಸಹಾರ)ಎಡೆ ಪ್ರಸಾದ ಇಡುವ ಸಂಪ್ರದಾಯ ನಡೆದುಕೊಂಡು ಬಂದಿದೆ ಎಂದರು.
ಈ ಪೂಜಾ ವಿಧಾನಗಳನ್ನು ದಾಸನಪುರ, ಬೊಮ್ಮಡಗೆರೆ ಮತ್ತು ಮುತಕದಹಳ್ಳಿ ಅರ್ಚಕರನ್ನು ನೇಮಿಸಿ ಕರಾರು ಮಾಡಲಾಗಿದೆ. ಈ ನಡುವೆ ದೇವಾಲಯ ಮುಜುರಾಯಿ ಇಲಾಖೆಗಳಿಗೆ ಸೇರಿಸಿದ್ದರೂ ಪೂಜಾ ವಿಧಾನ, ಸಂಪ್ರದಾಯ ಯಥಾಸ್ಥಿತಿಯಲ್ಲಿ ನಡೆದುಕೊಂಡು ಬರುತ್ತಿದ್ದವು. ಕಳೆದ ವಾರದಿಂದ ಆಡಳಿತ ಮಂಡಳಿಯ ವೆಂಕಟರಂಗಯ್ಯ ಮತ್ತು ಉಸ್ತುವಾರಿ ಮಂಜುನಾಥ್ ಕಾಲಾಂತರದಿಂದ ನಡೆದುಕೊಂಡು ಬಂದ ಪದ್ಧತಿಗೆ ನಿಷೇಧ ಹೇರಿದ್ದಾರೆ. ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಸಂಪ್ರದಾಯಿಕ ಪದ್ಧತಿ ಮುಂದುವರೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.