ತಿಪಟೂರು: ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ಅಭಿಮಾನಿಗಳು 42 ಯುನಿಟ್ ರಕ್ತ ಹಾಗೂ 50ಕ್ಕೂ ಹೆಚ್ಚು ಮಂದಿನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ.
ಪುನೀತ್ ಪುಣ್ಯಸ್ಮರಣೆ ಅಂಗವಾಗಿ ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಆಲ್ಬೂರು ಹಾಗೂ ಅಣಪನಹಳ್ಳಿ ಗ್ರಾಮಸ್ಥರು ಇತ್ತೀಚೆಗೆ ರಕ್ತದಾನಹಾಗೂ ನೇತ್ರದಾನ ನೋಂದಣಿ ಶಿಬಿರ ಆಯೋಜಿಸಿದ್ದರು.
ತುಮಕೂರಿನ ಜಿಲ್ಲಾ ಆಸ್ಪತ್ರೆಯ ರಕ್ತ ಸಂಗ್ರಹ ನಿಧಿಯ ಡಾ.ಪ್ರದೀಪ್ ಮಾತನಾಡಿ, ‘ಕೊರೊನಾ ನಂತರದ ದಿನಗಳಲ್ಲಿ ರಕ್ತದಾನಿಗಳ ಸಂಖ್ಯೆ ಕ್ಷೀಣಿಸಿದೆ. ಇದರಿಂದ ಅತ್ಯಂತ ಅಗತ್ಯದ ಸಂದರ್ಭದಲ್ಲಿ ಕೆಲವೊಮ್ಮೆ ರಕ್ತ ದೊರೆಯದಂತಹ ಸನ್ನಿವೇಶಗಳನ್ನು ಎದುರಿಸಿದ್ದೇವೆ. ರಕ್ತದಾನ ಮಾಡುವುದರಿಂದ ದೇಹಕ್ಕೂ ಅನುಕೂಲವಾಗುವ ಜೊತೆಗೆ ಉತ್ತಮ ಆರೋಗ್ಯದ ವೃದ್ಧಿಗೂ ಸಹಕಾರಿಯಾಗಲಿದೆ. ಜೊತೆಗೆ ತ್ವರಿತವಾಗಿ ರಕ್ತವೂ ಉತ್ಪತ್ತಿಯಾಗುತ್ತದೆ’ ಎಂದರು.
‘ಒಬ್ಬರು ರಕ್ತ ನೀಡುವುದರಿಂದ ನಾಲ್ಕು ಜೀವ ಕಾಪಾಡುವಂತಹ ಅವಕಾಶ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಲಿ’ ಎಂದು ಆಶಿಸಿದರು.
ನೊಣವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಚನ್ನಕೇಶವ, ಅಶೋಕ್, ರಮೇಶ್, ಸತೀಶ್, ಸ್ವಾಮಿ, ಕೆ. ಗಂಗಾಧರ್, ಚಂದ್ರಶೇಖರ್ ಸೇರಿದಂತೆ ನೂರಾರು ಅಭಿಮಾನಿಗಳು ಹಾಜರಿದ್ದರು.