ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಮಟ್ಟಿಗೆ ಒಬ್ಬ ಆಂತರಿಕ ವಿಮರ್ಶಕರಾಗಿದ್ದರು. ಧರ್ಮ ಎಂಬುದು ಅವರಿಗೆ ರಾಜಕೀಯ ಅಸ್ತ್ರವಾಗಿರಲಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಮುಜಾಫರ್ ಅಸಾದಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರವು ಅಂಬೇಡ್ಕರ್ ಅವರ 64ನೇ ಮಹಾ ಪರಿನಿರ್ವಾಣದ ಅಂಗವಾಗಿ ಭಾನುವಾರ ಆಯೋಜಿಸಿದ್ದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮ ಎಂಬುದು ಅಂಬೇಡ್ಕರ್ ಅವರಿಗೆ ಆಂತರಿಕ ವಿಮರ್ಶೆಯ ವಿಷಯವಾಗಿತ್ತು. ಹಾಗಾಗಿ ಅವರು ಅ ವಿಷಯವನ್ನು ಚರ್ಚೆಗೆ ಒಳಪಡಿಸುವುದಕ್ಕಾಗಿ ಒಂದು ವಿಮರ್ಶಾ ಸಮಾಜದ ನಿರ್ಮಾಣಕ್ಕೆ ಮುಂದಾದರು ಎಂದರು.
ಧರ್ಮವನ್ನು ಅಂಬೇಡ್ಕರ್ ಅವರು ಸಾಮಾಜಿಕ ಸಮಸ್ಯೆಯ ವಿಷಯವನ್ನಾಗಿ ನೋಡಿದ್ದಾರೆ. ಭಾರತದಲ್ಲಿನ ಜಾತಿ ವ್ಯವಸ್ಥೆ ಮತ್ತು ಶಾಸ್ತ್ರೀಯ ಗ್ರಂಥಗಳನ್ನು ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ್ದಾರೆ. ಆದರೆ ಅಂಬೇಡ್ಕರ್ ಅವರಿಗೆ ಸಿಗಬೇಕಾದ ಸ್ಥಾನಮಾನ 70ರ ದಶಕದವರೆಗೂ ಸಿಗಲಿಲ್ಲ. ಇದಕ್ಕೆ ರಾಜಕೀಯ ಕಾರಣಗಳೂ ಇರಬಹುದು ಎಂದು ವಿಷಾದಿಸಿದರು.
ಕಾರ್ಯಕ್ರಮವನ್ನು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಉದ್ಘಾಟಿಸಿದರು. ಕುಲಸಚಿವ ನರಸಿಂಹಪ್ಪ, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜಿ. ಬಸವರಾಜ, ಪ್ರಾಶುಂಪಾಲ ಕೆ. ರಾಮಚಂದ್ರಪ್ಪ, ನಾಗಭೂಷಣ್ ಬಗ್ಗನಡು ಹಾಜರಿದ್ದರು.