ತುಮಕೂರು: ಬುಗುಡನಹಳ್ಳಿ ಕೆರೆ ಹೂಳೆತ್ತಲು ಕಾನೂನಿನ ಪ್ರಕಾರ ಕ್ರಮಕೈಗೊಳ್ಳುತ್ತಿಲ್ಲ. ಕೆರೆ ಹೂಳೆತ್ತುವ ಹಾಗೂ ಹೇಮಾವತಿ ನಾಲೆ ಅಭಿವೃದ್ಧಿ ಕಾಮಗಾರಿ ಸಂಬಂಧ ಶ್ವೇತಪತ್ರ ಹೊರಡಿಸುವಂತೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಒತ್ತಾಯಿಸಿದ್ದಾರೆ.
₹64 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದ ಹೇಮಾವತಿ ನಾಲೆಯ ದುರಸ್ತಿ, ನಾಲೆ ಮತ್ತು ಕೆರೆಯಲ್ಲಿ ಹೂಳೆತ್ತುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಸ್ಥಳ ಪರಿಶೀಲನೆ ನಡೆಸಿ 2019ರ ಆಗಸ್ಟ್ 19ರಂದು ಶ್ವೇತಪತ್ರಕ್ಕೆ ಒತ್ತಾಯಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಆಗಮಿಸುತ್ತಿದ್ದಂತೆ ಹೇಮಾವತಿ ನೀರಿನ ಜಪ ಮಾಡುವ ಶಾಸಕರು, ಸಂಸದರು ಹೇಮಾವತಿ ನೀರು ನಿಲ್ಲುವ ಕೆರೆ ಸಂರಕ್ಷಣೆ ಬಗ್ಗೆ ಯಾವುದೇ ಚಕಾರ ಎತ್ತುವುದಿಲ್ಲ. ಪ್ರತಿ ಮಳೆಗಾಲಕ್ಕೂ ಮುನ್ನವೇ ಕೆರೆ ಖಾಲಿಯಾದರೂ ಹೂಳೆತ್ತುವ ಕೆಲಸಕ್ಕೆ ಮುಂದಾಗಿಲ್ಲ. ನಾಲೆಯ ದುರಸ್ತಿ ಕಾರ್ಯವೂ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕೆರೆಯ ಅಕ್ಕ-ಪಕ್ಕದ ರೈತರು ಕೆರೆಯಿಂದ ತುಂಬಿರುವ ಹೂಳು ತೆಗೆದು ತಮ್ಮ ಹೊಲ ಮತ್ತು ತೋಟಗಳಿಗೆ ಹೊಡೆಯಲು ಬಿಡುತ್ತಿಲ್ಲ. ರಾಜ್ಯ ಸರ್ಕಾರ ಬುಗುಡನಹಳ್ಳಿ ಕೆರೆಗೆ 24 ಟಿಎಂಸಿ ನೀರು ಪೂರೈಕೆ ಮತ್ತು ಕಾಮಗಾರಿಗೆ ಸಂಬಂಧಪಟ್ಟಂತೆ ಶ್ವೇತಪತ್ರ ಹೊರಡಿಸಿ ಜಿಲ್ಲೆಯ ಜನತೆಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.