ತುಮಕೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತುಮಕೂರು ನಗರ ಉಪವಿಭಾಗದ ರೌಡಿ ಪಟ್ಟಿಯಲ್ಲಿರುವವರು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಪರೇಡ್ ಚಿಲುಮೆ ಸಮುದಾಯ ಭವನದ ಬಳಿ ಸೋಮವಾರ ನಡೆಯಿತು.
125 ಮಂದಿ ಪರೇಡ್ನಲ್ಲಿ ಭಾಗವಹಿಸಿದ್ದರು. ‘ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸಗಳನ್ನು ಮಾಡಬಾರದು. ಬೆಂಗಳೂರು ಇಲ್ಲವೆ ಹೊರಗಿನ ಜಿಲ್ಲೆಯ ಅಪರಾಧಿಗಳಿಗೆ ನಗರದಲ್ಲಿ ತಂಗಲು ಸಹಾಯ ಮಾಡುವುದು, ಜೈಲಿನಲ್ಲಿರುವ ಕ್ರಿಮಿನಲ್ಗಳನ್ನು ಮೊಬೈಲ್ ಮೂಲಕ ಸಂಪರ್ಕಿಸುವುದನ್ನು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಎಚ್ಚರಿಸಿದರು.
‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ನಿರ್ದಿಷ್ಟ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮತದಾರರಿಗೆ ಭೀತಿ ಹುಟ್ಟಿಸಿದರೆ ಗಡಿಪಾರು ಮಾಡಲಾಗುವುದು. ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಡಿವೈಎಸ್ಪಿ ತಿಪ್ಪೇಸ್ವಾಮಿ, ಇನ್ಸ್ಪೆಕ್ಟರ್ಗಳಾದ ರಾಧಾಕೃಷ್ಣ, ಮಧುಸೂದನ್, ರಾಮಕೃಷ್ಣಯ್ಯ ಹಾಗೂ ಇತರ ಅಧಿಕಾರಿಗಳು ಇದ್ದರು.