ತುಮಕೂರು: ಹಾಸನದ ಗೊರೂರು ಜಲಾಶಯದಿಂದ ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಇಲ್ಲಿ ಸೋಮವಾರ ಒತ್ತಾಯಿಸಿದರು.
ಜನ–ಜಾನುವಾರುಗಳಿಗೆ ಕುಡಿಯಲು, ಕೃಷಿ ಚಟುವಟಿಕೆಯ ದೃಷ್ಟಿಯಿಂದ ಕೂಡಲೇ ನೀರು ಬಿಡಬೇಕು. ಈಗಾಗಲೇ ಸಚಿವರಾದ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಅವರಿಗೆ ನೀರು ಬಿಡುವ ಕುರಿತು ಮನವಿ ಸಲ್ಲಿಸಲಾಗಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ, ಜಿಲ್ಲೆಯ ಜನರಿಗೆ ನೀರು ಕೊಡಲಿ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಚಿವ ರಾಜಣ್ಣ ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದು, ನೀರು ಬಿಡಲು ಕ್ರಮಕೈಗೊಳ್ಳಬೇಕು. ಜಿಲ್ಲೆಯ ಜನರು ಒಂದಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಜಿಲ್ಲೆಗೆ ಇದುವರೆಗೆ 5.70 ಟಿಎಂಸಿ ನೀರು ಹರಿಸಿದ್ದು, ಗೊರೂರು ಜಲಾಶಯದಲ್ಲಿ ಸದ್ಯ 18 ಟಿಎಂಸಿ ನೀರಿನ ಸಂಗ್ರಹವಿದೆ. ನಮ್ಮ ಪಾಲಿನ ನೀರು ಸಂಪೂರ್ಣವಾಗಿ ಬಿಡಬೇಕು ಎಂದು ಒತ್ತಾಯಿಸಿದರು.
ಎಲ್ಲ ವಿಧಾನಸಭಾ ಕ್ಷೇತ್ರಗಳ ಕೆರೆಗಳನ್ನು ತುಂಬಿಸಲು 14 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಬುಗುಡನಹಳ್ಳಿ ಕೆರೆಗೆ 363 ಎಂಸಿಎಫ್ಟಿ ನೀರು ತುಂಬಿಸಬೇಕಿದ್ದು, ಈವರೆಗೆ 179.55 ಎಂಸಿಎಫ್ಟಿಯಷ್ಟು ನೀರು ಹರಿಸಲಾಗಿದೆ. ಬಾಕಿ ನೀರನ್ನು ಶೀಘ್ರವೇ ಹರಿಸಬೇಕು ಎಂದರು.
ಮುಖಂಡ ಕೆ.ಪಿ.ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.