ತುಮಕೂರು: ‘ಸಿದ್ದರಾಮಯ್ಯ ಅಥವಾಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆದರೆ ಮಾತ್ರ ಮೈತ್ರಿ ಸರ್ಕಾರ ಉಳಿಯುತ್ತದೆ’ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಎನ್.ರಾಜಣ್ಣ ಹೇಳಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇಬೇಕು ಎಂಬುದಾದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಖರ್ಗೆಯವರು ಮುಖ್ಯಮಂತ್ರಿ ಆಗಲು ಯಾರದೂ ಆಕ್ಷೇಪ ಇಲ್ಲ.ಇಲ್ಲದೇ ಇದ್ದರೆ ನಾಲ್ಕೈದು ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ’ ಎಂದರು.
‘ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಹೇಳಿರಬಹುದು. ಅವರು ಹೇಳಿದರೆ ಎಲ್ಲವೂ ಆಗಿಬಿಡುತ್ತಾ? ಅವರು ಹೇಳಿದ್ದು ಭಗವದ್ಗೀತೇನಾ? ಅವರು ಹೇಳಿದಂತೆ ಎಂದಾದರೂ ನಡೆದುಕೊಂಡಿದ್ದಾರೆಯೇ?’ ಎಂದು ರಾಜಣ್ಣ ವಾಗ್ದಾಳಿ ನಡೆಸಿದರು.
‘ಮುಂಬೈಗೆ ಹೋಗಿ ಅತೃಪ್ತ ಶಾಸಕರ ಮನವೊಲಿಸಿ ಕರೆತರುತ್ತೇವೆ. ಯಾಕೆಂದರೆ ಜೀರೊ ಟ್ರಾಫಿಕ್ (ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರನ್ನು ಕುರಿತು), ಅವ್ರು ಇವ್ರನ್ನೆಲ್ಲ ಉಳಿಸಿ ಸರ್ಕಾರ ಮುಂದುವರಿಸುತ್ತೇವೆ’ ಎಂದು ಹೇಳಿದರು.