ಶಿರಾ: ನಗರದ ವಿವೇಕಾನಂದ ಕ್ರೀಡಾಂಗಣದ ಕಸ್ತೂರಿ ರಂಗಪ್ಪನಾಯಕನ ವೇದಿಕೆಯಲ್ಲಿ ಮಂಗಳವಾರ ಶಿರಾ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಿತು.
ವಿವೇಕಾನಂದ ಕ್ರೀಡಾಂಗಣದಲ್ಲಿ ತಹಶೀಲ್ದಾರ್ ಡಾ.ದತ್ತಾತ್ರೇಯ ಗಾದ ಅವರು ರಾಷ್ಟ್ರಧ್ವಜವನ್ನು, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು ಅವರು ನಾಡಧ್ವಜವನ್ನು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ ಪರಿಷತ್ ಧ್ವಜಾರೋಹಣ ನಡೆಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಕಲಾ ತಂಡಗಳೊಂದಿಗೆ ಸಮ್ಮೆಳನಾಧ್ಯಕ್ಷ ರಘುನಾಥ ಚ.ಹ ಅವರನ್ನು ಸಾರೋಟಿನಲ್ಲಿ ಅಂಬೇಡ್ಕರ್ ವೃತ್ತದಿಂದ ಭಗವಾನ್ ವೃತ್ತ, ಹೊಸ ಬಸ್ ನಿಲ್ದಾಣ ರಸ್ತೆ, ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಧಾನ ವೇದಿಕೆಗೆ ಕರೆತರಲಾಯಿತು.
ತಾಲ್ಲೂಕಿನ ಲೇಖಕರು ಬರೆದಿರುವ ಪುಸ್ತಕಗಳನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಸಕ್ಕರ ನಾಗರಾಜು ಪುಸ್ತಕ ಮಳಿಗೆ ತೆರೆದಿದ್ದು ವಿಶೇಷವಾಗಿತ್ತು.