ಗುಬ್ಬಿ: ತಾಲ್ಲೂಕಿನ ಬಾಗೂರು ಗ್ರಾಮದ ಸರ್ಕಾರಿ ಜಮೀನಿನಲ್ಲಿದ್ದ ಮರ, ಗಿಡಗಳನ್ನು ನಾಶ ಮಾಡಿ ಅಕ್ರಮವಾಗಿ ತಮ್ಮದಾಗಿಸಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಇದಕ್ಕೆ ತಾಲ್ಲೂಕು ಆಡಳಿತ ತಡೆ ನೀಡಬೇಕು ಎಂದು ಬಾಗೂರು ಗ್ರಾಮಸ್ಥರು ಭಾನುವಾರ ಗುಬ್ಬಿ ಪೊಲೀಸರು ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಸರ್ವೆ ನಂಬರ್ 4, 9 ಮತ್ತು 11ರಲ್ಲಿ ಸುಮಾರು 28 ಎಕರೆ ಸರ್ಕಾರಿ ಬೀಳು ಪ್ರದೇಶ ಇದೆ. ಕೆಲವರಿಗೆ ಬಗರ್ಹುಕುಂ ಯೋಜನೆಯಡಿ ಜಮೀನು ಹಕ್ಕುಪತ್ರ ಪಡೆದಿದ್ದಾರೆ. ಇಲ್ಲಿ ಉಳಿದಿದ್ದ 4 ಎಕರೆಯಲ್ಲಿನ ಮರ, ಗಿಡಗಳನ್ನು ಈಗ ನಾಶ ಮಾಡಿದ್ದಾರೆ. ಈ ಬಗ್ಗೆ ದೂರು ನೀಡಲಾಗಿತ್ತು. ಆದರೂ ಕ್ರಮವಹಿಸಲು ವಿಳಂಬವಾಗಿದೆ ಎಂದು ಸ್ಥಳೀಯರು ದೂರಿದರು.
ಬಗರ್ಹುಕುಂ ಯೋಜನೆಯಡಿ ಜಮೀನು ಮಂಜೂರಿಗೆ ನಿಯಮಗಳು ಇವೆ. ಸರ್ಕಾರಿ ಜಾಗವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ಕೆಲಸವನ್ನು ತಾಲ್ಲೂಕು ಆಡಳಿತ ಮಾಡಬೇಕು ಎಂದು ಸ್ಥಳೀಯ ದಯಾನಂದಸ್ವಾಮಿ ಮನವಿ ಮಾಡಿದರು.
ನಿಟ್ಟೂರು ಹೋಬಳಿಯಲ್ಲಿ ಅತಿಕ್ರಮಣ ಪ್ರಕರಣಗಳು ಹೆಚ್ಚಾಗುತ್ತಿವೆ. ಅರಣ್ಯ ಪ್ರದೇಶಗಳು ಒತ್ತುವರಿ ಆಗುತ್ತಿವೆ. ಗೋಮಾಳ, ಗೋಕಟ್ಟೆ ಜಾಗಗಳು ಮಾಯವಾಗಿವೆ. ಈಗ ಸರ್ಕಾರಿ ಖರಾಬು, ಬೀಳು ಸ್ಥಳಗಳತ್ತ ಕಣ್ಣು ಬಿದ್ದಿದೆ. ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕು ಎಂದು ಗುರುಸಿದ್ದಯ್ಯ ಒತ್ತಾಯಿಸಿದರು.
ಮಂಜುನಾಥ್, ರಘು, ವಿಜಯ್ಕುಮಾರ್, ಸಿದ್ದರಾಮಯ್ಯ, ರಾಜೇಶ್, ಯಡಿಯೂರಪ್ಪ, ಸಿದ್ದರಾಮಪ್ರಭು ಇದ್ದರು.