ತುಮಕೂರು: ಸಿದ್ಧಿವಿನಾಯಕ ಸೇವಾ ಮಂಡಳಿಯು ಗಣೇಶೋತ್ಸವಕ್ಕೆ ವೈಭವಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಬಾರಿ ‘ಭಕ್ತ ಮಾರ್ಕಂಡೇಯ’ ಅಥವಾ ‘ಸಿದ್ಧಿ ವಿನಾಯಕ ವೈಭವ’ದ ರೂಪದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಿದೆ.
ಸೆ. 18ರ ಗಣೇಶ ಚತುರ್ಥಿಯಂದು 47ನೇ ವರ್ಷದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಗಳು ನೆರವೇರಲಿದ್ದು, 30 ದಿನಗಳ ಕಾಲ ಪೂಜಾ ಕಾರ್ಯಗಳು, ವೈವಿಧ್ಯ ಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಂಡಳಿ ಉಪಾಧ್ಯಕ್ಷ ಎಚ್.ಆರ್.ನಾಗೇಶ್ ಹೇಳಿದರು.
ಒಂದು ತಿಂಗಳ ಕಾಲ ಪ್ರತಿ ದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಸೆ. 18ಕ್ಕೆ ನಾದಸ್ವರ, ಸೆ.19ಕ್ಕೆ ಸುಗಮ ಸಂಗೀತ, 20ಕ್ಕೆ ವೈವಿಧ್ಯಮಯ ನೃತ್ಯ, 21ಕ್ಕೆ ಭರತ ನಾಟ್ಯ, ಜಾನಪದ ನೃತ್ಯ, 24ಕ್ಕೆ ಆಡೋಣ ಬಾರ– ಜಾನಪದ ಗೀತೆ, 28ಕ್ಕೆ ನೃತ್ಯ ಸೌರಭ, ನೃತ್ಯ ರೂಪಕ, ಅ.1ಕ್ಕೆ ಹಾಸ್ಯ ನಾಟಕ, 3ಕ್ಕೆ ವಾದ್ಯಗೋಷ್ಠಿ, 5ಕ್ಕೆ ಹಾಸ್ಯ ರಸಮಂಜರಿ– ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಅ. 18ರಂದು ಗಣೇಶ ಮೂರ್ತಿಯ ವಿಸರ್ಜನೆ ನಡೆಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಸಿದ್ಧಿವಿನಾಯಕ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಉಪಸಮಿತಿ ಅಧ್ಯಕ್ಷ ಟಿ.ಎಚ್.ಪ್ರಸನ್ನಕುಮಾರ್, ‘ಪ್ರತಿ ದಿನವೂ ಸಂಜೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಅ. 8ರಂದು ಸ್ಥಳದಲ್ಲೇ ಗಣಪತಿ, ನಂದಿನಿ ಹಾಲಿನ ಲಾಂಛನ ಹಸುವಿನ ಚಿತ್ರ ರಚಿಸುವ ಸ್ಪರ್ಧೆಯನ್ನು ಹಾಲು ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಇದೇ ವೇಳೆ ಎನ್.ಕೃಷ್ಣಮೂರ್ತಿ ಅವರು ‘ಭಕ್ತ ಮಾರ್ಕಂಡೇಯ’ ಅಥವಾ ‘ಸಿದ್ಧಿವಿನಾಯಕ ವೈಭವ’ ದೃಶ್ಯ ರೂಪಕದ ಕಥಾನಕವನ್ನು ವಿವರಿಸಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮಗಳು ನೆರವೇರಲಿವೆ. ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಮೊದಲಾದವರು ಭಾಗವಹಿಸುವರು.
ಸಿದ್ಧಿವಿನಾಯಕ ಸೇವಾ ಮಂಡಳಿ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರರಾವ್, ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ಧರಾಮಯ್ಯ, ಖಜಾಂಚಿ ಎಸ್.ಬಿ.ಪ್ರಭು, ನಿರ್ದೇಶಕರಾದ ಟಿ.ಆರ್.ನಟರಾಜ್, ಜಿ.ಸಿ.ವಿರೂಪಾಕ್ಷ, ಎನ್.ವೆಂಕಟೇಶ್, ಅನುಸೂಯ ರುದ್ರಪ್ರಸಾದ್, ರೇಣುಕ ಪರಮೇಶ್, ಟಿ.ಎಂ.ಲಿಂಗಪ್ಪ, ಜಿ.ಎಸ್.ಸಿದ್ಧರಾಜು, ಕೆ.ನರಸಿಂಹಮೂರ್ತಿ, ಇಂದ್ರಾಣಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.