ತುಮಕೂರು: ನಗರದ ಗುಬ್ಬಿ ಗೇಟ್ ಸಮೀಪದ ರಿಂಗ್ ರಸ್ತೆಯ ಬಳಿ ಟ್ರಾಫಿಕ್ ಸಮಸ್ಯೆಯಿಂದ ರಸ್ತೆ ದಾಟಲು ವಾಹನ ಸವಾರರು ಪ್ರತಿ ನಿತ್ಯವೂ ಪರದಾಡುತ್ತಿದ್ದಾರೆ.
ಇಲ್ಲಿ ಯಾವುದೇ ರೀತಿಯ ಟ್ರಾಫಿಕ್ ಸಿಗ್ನಲ್ ಅಳವಡಿಸದ ಕಾರಣ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ. ಪ್ರತಿ ನಿತ್ಯ ನೂರಾರು ವಾಹನಗಳು ಈ ರಸ್ತೆಯ ಮೂಲಕ ಹಾದು ಹೋಗುತ್ತವೆ. ಗುಬ್ಬಿ ಗೇಟ್ ದಾಟಿ ಮುಂದೆ ಸಾಗಲು ಸಾಕಷ್ಟು ಸಮಯ ನಿಂತಲ್ಲೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಹನ ಸವಾರರು ನಗರದ ಕಡೆಯಿಂದ ಗುಬ್ಬಿಗೆ ಹೋಗಲು ಇದೇ ರಸ್ತೆಯನ್ನು ಹೆಚ್ಚಾಗಿ ಬಳಸುತ್ತಾರೆ. ರಿಂಗ್ ರಸ್ತೆಯಿಂದ ಬರುವ ವಾಹನಗಳು ರಸ್ತೆ ದಾಟಿ ಮುಂದೆ ಸಾಧ್ಯವಾಗುತ್ತಿಲ್ಲ. ಗುಬ್ಬಿ ಕಡೆಯಿಂದ ಬರುವ ವಾಹನಗಳು ಮುಂದೆ ಸಾಗಲು ಪ್ರಯಾಸ ಪಡಬೇಕಿದೆ. ಸಂಚಾರ ನಿಯಂತ್ರಣ ವ್ಯವಸ್ಥೆ ಇಲ್ಲವಾಗಿದ್ದು, ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿವೆ. ಇದರಿಂದ ವಾಹನ ಸವಾರರು ಪ್ರತಿ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ನಿಯಂತ್ರಿಸುತ್ತಿಲ್ಲ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದ್ದ ಪೊಲೀಸರು ‘ತಮ್ಮದೇ ಕೆಲಸ’ದಲ್ಲಿ ತೊಡಗಿರುತ್ತಾರೆ. ಗೃಹ ಸಚಿವರು ಸಂಚರಿಸುವ ಸಮಯದಲ್ಲಿ ರಸ್ತೆಗೆ ಬರುವ ಪೊಲೀಸರು, ನಂತರ ಮಾಯವಾಗುತ್ತಾರೆ. ಇಷ್ಟೆಲ್ಲ ವಾಹನ ದಟ್ಟಣೆ, ಟ್ರಾಫಿಕ್ ಜಾಮ್ನಿಂದ ಜನರು ಬಳಲುತ್ತಿದ್ದರೂ ಹಿರಿಯ ಪೊಲೀಸ್ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.
‘ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸಬೇಕು. ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಇಲ್ಲಿಯೇ ಒಬ್ಬರು ಅಥವಾ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ವಾಹನ ಸವಾರ ನೀರಜ್ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.