ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಒಂದೇ ಮಳೆಗೆ ಸೋರುತ್ತಿದೆ ವಾಲ್ಮೀಕಿ ಭವನ

ಭವನ ನಿರ್ಮಿಸಿದ ನಿರ್ಮಿತಿ ಕೇಂದ್ರ; ಕಳಪೆ ಕಾಮಗಾರಿ ಆರೋಪ
Published 23 ಮೇ 2024, 4:23 IST
Last Updated 23 ಮೇ 2024, 4:23 IST
ಅಕ್ಷರ ಗಾತ್ರ

ತುಮಕೂರು: ನಗರದ ಮರಳೂರು ದಿಣ್ಣೆ ಹತ್ತಿರದ ಎಸ್‌ಎಸ್‌ಐಟಿ ಸಮೀಪದಲ್ಲಿರುವ ವಾಲ್ಮೀಕಿ ಭವನ ಒಂದೇ ಮಳೆಗೆ ಸೋರುತ್ತಿದ್ದು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಈಗಾಗಲೇ ಬಿರುಕು ಕಾಣಿಸಿಕೊಂಡಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಟ್ಟಡ ಸೋರುತ್ತಿದೆ. ಭವನದ ನಿರ್ವಹಣೆಗೆ ಸಿಬ್ಬಂದಿ ಪರದಾಡುತ್ತಿದ್ದಾರೆ. ನೆಲ ಮಹಡಿಯಲ್ಲಿ ನಿಂತ ನೀರು ಹೊರ ಹಾಕಲು ಗೋಣಿಚೀಲ ಹಾಸಿದ್ದ ದೃಶ್ಯಗಳು ಕಂಡು ಬಂದವು. ‘ಕಳಪೆ ಕಾಮಗಾರಿ ನಡೆದಿದೆ, ಅವೈಜ್ಞಾನಿಕವಾಗಿ ವಾಲ್ಮೀಕಿ ಭವನ ನಿರ್ಮಿಸಲಾಗಿದೆ’ ಎಂಬ ಸಾರ್ವಜನಿಕರ ಆರೋಪಕ್ಕೆ ಈಗಿನ ಪರಿಸ್ಥಿತಿ ಸಾಕ್ಷಿಯಂತಿದೆ. ಈಗಷ್ಟೇ ಮಳೆ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಬಿರುಸು ಪಡೆದರೆ ಮತ್ತಷ್ಟು ಸಮಸ್ಯೆಗಳು ಎದುರಾಗಲಿವೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಈ ಭವನವನ್ನು ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿದೆ. ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿದ ಬಹುತೇಕ ಕಟ್ಟಡಗಳ ಸ್ಥಿತಿ ಇದೇ ರೀತಿ ಇದೆ. ನಗರದಲ್ಲಿ ನಿರ್ಮಿಸಿರುವ ಬಿಇಒ ಕಚೇರಿ ಸಹ ಇಂತಹುದೇ ಸ್ಥಿತಿಗೆ ತಲುಪಿದೆ. ಈಗ ವಾಲ್ಮೀಕಿ ಭವನ ಸೇರ್ಪಡೆಯಾಗಿದೆ. ನಿರ್ಮಿತಿ ಕೇಂದ್ರಕ್ಕೆ ನಿರ್ಮಾಣ ಗುತ್ತಿಗೆ ನೀಡಬಾರದು ಎಂಬ ಒತ್ತಾಯಗಳಿಗೂ ಮಣಿಯದೆ ಅಧಿಕಾರಿಗಳು ಅದೇ ಸಂಸ್ಥೆಗೆ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಮೂಗಿನ ನೇರದಲ್ಲೇ ಕಳಪೆ ಕಾಮಗಾರಿ ನಡೆಯುತ್ತಿದೆ. ಇಂತಹ ಕಳಪೆ ಕಾಮಗಾರಿ ನಿರ್ವಹಿಸಿದ ನಿರ್ಮಿತಿ ಕೇಂದ್ರದ ಮೇಲೆ ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಸಾರ್ವಜನಿಕರ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರ ಇಲ್ಲವಾಗಿದೆ.

ವಾಲ್ಮೀಕಿ ಭವನ ಎರಡು ಮಹಡಿಗಳನ್ನು ಹೊಂದಿದ್ದು, ಎರಡನೇ ಮಹಡಿಯಲ್ಲಿ ಇಲಾಖೆಯ ಕಚೇರಿ ಇದೆ. ಲಿಫ್ಟ್‌, ಶೌಚಾಲಯ, ಊಟದ ಸಭಾಂಗಣ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.

ತಗ್ಗು ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿದ್ದರಿಂದ ರಸ್ತೆಯ ನೀರು ಭವನದ ಒಳಗೆ ಹರಿದು ಬರುತ್ತಿದೆ. ಕಟ್ಟಡದ ಹೊರಗಡೆ ಒಂದು ಭಾಗದಲ್ಲಿ ನೀರು ನಿಲ್ಲುತ್ತಿದೆ. ಭವನದ ನೆಲ ಮಹಡಿಯಲ್ಲಿ ಊಟದ ಸಭಾಂಗಣ ಮಾಡಿದ್ದು, ಈ ಹಿಂದೆ ಉದ್ಘಾಟನೆಗೂ ಮುನ್ನವೇ ಸಭಾಂಗಣಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಈಗ ಸಭಾಂಗಣಕ್ಕೆ ಮಳೆ ನೀರು ಬರದಂತೆ ಭವನ ಹಿಂಭಾಗದಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ ಸಭಾಂಗಣದ ಮುಂಭಾಗದಲ್ಲಿ ನಿಲ್ಲುವ ನೀರು ಚರಂಡಿಗೆ ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ.

ಮತ್ತೊಂದು ಕಡೆ ಭವನದ ಪಕ್ಕದಲ್ಲಿರುವ ಚರಂಡಿಗೆ ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದೆ. ಇದರಿಂದಾಗಿ ಚರಂಡಿ ನೀರು ನಿಂತಲ್ಲಿಯೇ ನಿಂತು ಗಬ್ಬು ವಾಸನೆ ಬೀರುತ್ತಿದೆ. ಮಳೆಗಾಲದಲ್ಲಿ ಚರಂಡಿ ತುಂಬಿಕೊಂಡು ಭವನದ ಆವರಣಕ್ಕೆ ಕಲುಷಿತ ನೀರು ನುಗ್ಗುತ್ತಿದೆ. ಜನರಿಗೆ ಅರಿವು ಮೂಡಿಸಬೇಕಾದ ಅಧಿಕಾರಿಗಳೇ ಚರಂಡಿ ಮುಚ್ಚಿ ರಸ್ತೆ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ನಿರ್ಮಾಣ ಕಾರ್ಯ ಮುಗಿದ ಒಂದೇ ವರ್ಷಕ್ಕೆ ಭವನ ಹಾಳಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಭವನದ ಸುತ್ತ ನೀರು ನಿಲ್ಲುತ್ತಿದ್ದು, ಏನಾದರೂ ಹೆಚ್ಚು–ಕಡಿಮೆಯಾದರೆ ಯಾರು ಹೊಣೆ. ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಅವ್ಯವಸ್ಥೆ ಸರಿಪಡಿಸಬೇಕು. ತುರ್ತಾಗಿ ಕ್ರಮಕೈಗೊಳ್ಳಬೇಕು’ ಎಂದು ಮರಳೂರಿನ ರಾಮಕೃಷ್ಣ ಒತ್ತಾಯಿಸಿದರು.

ವಾಲ್ಮೀಕಿ ಭವನದ ಊಟದ ಸಭಾಂಗಣದ ಮುಂಭಾಗ ನೀರು ನಿಂತಿರುವುದು
ವಾಲ್ಮೀಕಿ ಭವನದ ಊಟದ ಸಭಾಂಗಣದ ಮುಂಭಾಗ ನೀರು ನಿಂತಿರುವುದು
ಭವನದ ಹತ್ತಿರ ಚರಂಡಿಗೆ ಮಣ್ಣು ಸುರಿದು ರಸ್ತೆ ನಿರ್ಮಿಸಿರುವುದು
ಭವನದ ಹತ್ತಿರ ಚರಂಡಿಗೆ ಮಣ್ಣು ಸುರಿದು ರಸ್ತೆ ನಿರ್ಮಿಸಿರುವುದು
ತುಮಕೂರಿನ ಮರಳೂರು ಬಳಿಯ ವಾಲ್ಮೀಕಿ ಭವನ
ತುಮಕೂರಿನ ಮರಳೂರು ಬಳಿಯ ವಾಲ್ಮೀಕಿ ಭವನ

₹3 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ 2023ರ ಮಾರ್ಚ್‌ 5ರಂದು ಉದ್ಘಾಟನೆ ಅಕ್ಟೋಬರ್‌ನಲ್ಲಿ ಮೊದಲ ಕಾರ್ಯಕ್ರಮ ಆಯೋಜನೆ

ತನಿಖೆಗೆ ಆಗ್ರಹ

ಈವರೆಗೆ ನಿರ್ಮಿತಿ ಕೇಂದ್ರ ನಿರ್ಮಿಸಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ತನಿಖೆ ನಡೆಸಬೇಕು. ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ವರದಿ ಪಡೆದುಕೊಂಡು ನಂತರ ಅಗತ್ಯ ಕ್ರಮ ಕೈಗೊಳ್ಳಬೇಕು. ಕಳಪೆ ಕಾಮಗಾರಿ ಮಾಡಿರುವುದು ದೃಢಪಟ್ಟರೆ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಹೆಸರು ಹೇಳಲು ಬಯಸದ ಇಲಾಖೆಯೊಂದರ ಉಪನಿರ್ದೇಶಕರು ಆಗ್ರಹಿಸಿದರು.

ವರ್ಷದ ನಂತರ ಕಚೇರಿ ಸ್ಥಳಾಂತರ

2018–19ನೇ ಸಾಲಿನಲ್ಲಿ ಭವನ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು. 2023ರ ಮಾರ್ಚ್‌ 5ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ಭವನ ಉದ್ಘಾಟಿಸಿದ್ದರು. ಹಿಂದಿನ ವರ್ಷದ ಅಕ್ಟೋಬರ್‌ 28ರಂದು ಇಲ್ಲಿ ಮೊದಲ ಕಾರ್ಯಕ್ರಮವಾಗಿ ವಾಲ್ಮೀಕಿ ಜಯಂತಿ ಆಚರಿಸಲಾಗಿತ್ತು. ಇದಾದ ನಂತರ ಭವನವನ್ನು ಸಾರ್ವಜನಿಕರ ಬಳಕೆಗೆ ನೀಡಲಾಗಿದೆ. ಕೆಲಸ ಮುಗಿದ ಒಂದು ವರ್ಷದ ನಂತರ ಇದೇ ತಿಂಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನು ಭವನಕ್ಕೆ ಸ್ಥಳಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT