ತುಮಕೂರು: ಏಪ್ರಿಲ್ನ ಬೇಸಿಗೆಯಲ್ಲೂ ತುಮಕೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಹಸಿರಿನಿಂದ ನಳನಳಿಸುತ್ತಿದೆ. ಈ ಹಸಿರಿನ ಪರಿಸರಕ್ಕೆ ಕೊರೊನಾ ಸಹ ಪರೋಕ್ಷ ಕಾರಣವಾಗಿದೆ!
ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ನೀರಿನ ಅಭಾವ ತೀವ್ರವಾಗುತ್ತಿತ್ತು. ವಿಶ್ವವಿದ್ಯಾಲಯದ ಗಿಡಮರಗಳು ಕಳೆಗುಂದುತ್ತಿದ್ದವು. ಆದರೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಈಗ ರಜೆ ಇರುವುದರಿಂದ ಸಾಕಷ್ಟು ನೀರಿನ ಉಳಿತಾಯವಾಗುತ್ತಿದೆ.
ವಿ.ವಿ ಆವರಣದಲ್ಲಿ ಹಾಗೂ ಹಾಸ್ಟೆಲ್ಗಳಲ್ಲಿ ಉಳಿಕೆ ಆಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಕ್ಯಾಂಪಸ್ ಅನ್ನು ಹಸಿರುಮಯವಾಗಿಸಲಾಗಿದೆ. ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಅವರು ನಿತ್ಯ ಕ್ಯಾಂಪಸ್ನಲ್ಲಿ ಖುದ್ದು ಹಾಜರಿದ್ದು ಕೆಲಸಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.
‘ಉಳಿಕೆಯಾಗಿರುವ ನೀರಿನ ಸದುಪಯೋಗ ಮಾಡುತ್ತಿದ್ದೇವೆ. ಸುಡುಬಿಸಿಲಿನಲ್ಲೂ ಸಾವಿರಾರು ಅಪರೂಪದ ಮರಗಳನ್ನು ಹೊಂದಿರುವ ನಮ್ಮ ಕ್ಯಾಂಪಸ್ ಹಸಿರಿನಿಂದ ತುಳುಕುತ್ತಿದೆ. ನೋಡಲು ಹೆಮ್ಮೆ ಎನಿಸುತ್ತದೆ’ ಎಂದು ಪ್ರೊ.ಸಿದ್ದೇಗೌಡ ತಿಳಿಸಿದರು.
ಕ್ಯಾಂಪಸ್ನಲ್ಲಿ ಸಂಗ್ರಹವಾದ ತರಗೆಲೆ ಮತ್ತಿತರ ತ್ಯಾಜ್ಯಗಳನ್ನು ನಿತ್ಯ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.