ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಾಗದಲ್ಲಿ ಅನಧಿಕೃತ ಮನೆ ನಿರ್ಮಾಣ

ತೆರವುಗೊಳಿಸಲು ಆಶ್ರಯ ನಿವೇಶನ ಆಕಾಂಕ್ಷಿಗಳಿಗೆ ತಹಶೀಲ್ದಾರ್ ಸೂಚನೆ
Last Updated 22 ಜನವರಿ 2021, 1:12 IST
ಅಕ್ಷರ ಗಾತ್ರ

ಕುಣಿಗಲ್: ನಿವೇಶನ ದೊರೆಯದ ಆಶ್ರಯ ನಿವೇಶನ ಆಕಾಂಕ್ಷಿಗಳು ಸರ್ಕಾರಿ ಜಾಗ ಅತಿಕ್ರಮಿಸಿ ಮನೆ ನಿರ್ಮಾ
ಣಕ್ಕೆ ಮುಂದಾಗಿದ್ದು, ತಹಶೀಲ್ದಾರ್ ವಿಶ್ವನಾಥ್ ಭೇಟಿ ನೀಡಿ ಎಚ್ಚರಿಕೆ ನೀಡಿದ ಘಟನೆ ಗುರುವಾರ ನಡೆಯಿತು.

ಪುರಸಭೆಯ ಮೂರನೇ ವಾರ್ಡ್‌ನ ಆಶ್ರಯ ಕಾಲೊನಿಗೆ ಹೊಂದಿಕೊಂಡಿರುವ ಸರ್ವೇ ನಂ 35ರ ನಾಲ್ಕು ಎಕರೆ ಜಾಗದಲ್ಲಿ ಆಶ್ರಯ ನಿವೇಶನಕ್ಕಾಗಿ ಹಲವು ವರ್ಷಗಳಿಂದ ಬೇಡಿಕೆ ಇಟ್ಟು, ಹಲವಾರು ಹೋರಾಟ ಮಾಡಿದ್ದರೂ, ನಿವೇಶನಗಳನ್ನು ಪಡೆಯಲಾಗದೆ ಅಸಮಾಧಾನಗೊಂಡಿದ್ದ ನಾಗರಿಕರು ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದರು. ಹತ್ತು ವರ್ಷಗಳಲ್ಲಿ ಈ ರೀತಿಯ ಘಟನೆ ಮೂರನೇ ಬಾರಿಗೆ ನಡೆಯುತ್ತಿದೆ.

ವಿಷಯ ತಿಳಿದ ತಹಶೀಲ್ದಾರ್ ವಿಶ್ವನಾಥ್ ಗುರುವಾರ ಸಿಬ್ಬಂದಿ
ಗಳೊಂದಿಗೆ ತೆರಳಿ, ‘ಸರ್ಕಾರಿ ಜಾಗವನ್ನು ಅತಿಕ್ರಮಿಸಿ, ಅನಧಿಕೃತವಾಗಿ ಮನೆಗಳನ್ನು ನಿರ್ಮಿಸುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ. ತೆರವುಗೊಳಿಸದಿದ್ದರೆ ಕಾನೂನು ಕ್ರಮ ತೆಗೆದುಕೊಂಡು ತೆರವುಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ನಿವೇಶನಕ್ಕಾಗಿ ಹೋರಾಡಿದ ಆಶಾ, ತಹಶೀಲ್ದಾರ್‌ ಅವರೊಂದಿಗೆ ವಾಗ್ವಾದ ನಡೆಸಿ, ‘ಈ ಭಾಗದಲ್ಲಿ ಹತ್ತಾರು ವರ್ಷಗಳಿಂದ ಕೂಲಿ ಕಾರ್ಮಿಕರು ನಿವೇಶನಕ್ಕಾಗಿ ಸಂಬಂದಪಟ್ಟವರಿಗೆ ಮನವಿ ಮಾಡಿ, ಅನೇಕ ಹೋರಾಟಗಳನ್ನು ಲಂಚ ಮುಕ್ತಾ ವೇದಿಕೆಯ ಅಧ್ಯಕ್ಷರಾದ ರಮೇಶ್ ನೇತೃತ್ವದಲ್ಲಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಪುರಸಭೆ ಸದಸ್ಯ ರಾಮು, ಮುಖ್ಯಾಧಿಕಾರಿಗಳು ಸ್ಪಂದಿಸದ ಕಾರಣ ವಿಧಿ ಇಲ್ಲದೆ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ.ಎಲ್ಲರೂ ಅರ್ಹರಾಗಿರುವ ಕಾರಣ ನಿವೇಶನಗಳನ್ನು ಮಂಜೂರು ಮಾಡಬೇಕು’ ಎಂದು ಆಗ್ರಹಿಸಿದರು.

ತಹಶೀಲ್ದಾರ ವಿಶ್ವನಾಥ್ ಮಾತನಾಡಿ, ನಿವೇಶನಗಳಿಗಾಗಿ ಪುರಸಭೆಗೆ ಆರ್ಜಿ ಸಲ್ಲಿಸಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಂಡು ನಿವೇಶನಗಳನ್ನು ಮಂಜೂರು ಮಾಡುವ ಭರವಸೆ ನೀಡಿದರು. ಸರ್ಕಾರಿ ಜಾಗವನ್ನು ಸಂರಕ್ಷಿಸುವಂತೆ ಮತ್ತು ಅತಿಕ್ರಮವಾಗದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಸಬಾ ಕಂದಾಯ ನಿರೀಕ್ಷಕ ಕೋದಂಡರಾಮು ಅವರಿಗೆ ಸೂಚಿಸಿದರು.

ಪುರಸಭೆ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನಗಳನ್ನು ಹಂಚಲು ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕರಂಗನಾಥ್ ಈಗಾಗಲೇ ಬಿದನಗೆರೆಯಲ್ಲಿ 14 ಎಕರೆ ಜಾಗವನ್ನು ಗುರುತಿಸಿದ್ದಾರೆ. ಪ್ರಕ್ರಿಯೆಗಳು ಪ್ರಾರಂಭವಾಗಿದೆ. ಈ ಸಮಯದಲ್ಲಿ ಕೆಲ ಕಿಡಿಗೇಡಿಗಳು ಆಶ್ರಯ ಕಾಲೊನಿ ಪಕ್ಕದ ಸರ್ಕಾರಿ ಜಾಗವನ್ನು ಕಬಳಿಸಲು ಕುಮ್ಮಕು ನೀಡುತ್ತಿದ್ದಾರೆ. ಆಶ್ರಯ ಕಾಲೊನಿಯಲ್ಲೂ ಅನಧಿಕೃತ ಮನೆಗಳ ನಿರ್ಮಾಣವಾಗಿದ್ದೂ, ಅಧಿಕಾರಿಗಳು ಪರಿಶೀಲಿಸಿ ಸರ್ಕಾರಿ ಜಾಗ ಸಂರಕ್ಷಿಸುವಂತೆ ಪುರಸಭೆ ಸದಸ್ಯ ರಂಗಸ್ವಾಮಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT