ಹಾಗಲವಾಡಿ: ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿಯಲ್ಲಿ ಶ್ರೀವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವೈಭವದಿಂದ ನಡೆಯಿತು.
ಬೆಳಿಗ್ಗೆಯಿಂದ ಅಗ್ನಿಕೊಂಡ, ದೇವಾಲಯದಲ್ಲಿ ಅಭಿಷೇಕ, ಸುಪ್ರಭಾತ ಸೇವೆ, ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು. ಮಧ್ಯಾಹ್ನ 1 ಗಂಟೆಗೆ ವೀರಭದ್ರೇಶ್ವರ ಸ್ವಾಮಿ ರಥೋತ್ಸವದಲ್ಲಿ ಲಿಂಗದವೀರರ ಕುಣಿತ, ನಗಾರಿ ವಾದ್ಯ, ನಂದಿ ಧ್ವಜ, ಬಾಣಬಿರುಸುಗಳೊಂದಿಗೆ ಸ್ವಾಮಿಯ ರಥೋತ್ಸವ ನಡೆಯಿತು.
ಸುಡು ಬಿಸಿಲು ಲೆಕ್ಕಿಸದೆ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ರಥವನ್ನು ಎಳೆದರು. ರಥಕ್ಕೆ ಹೂ, ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದರು. ಭಕ್ತಾದಿಗಳಿಗೆ ಮಹಾ ದಾಸೋಹ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.