ತುಮಕೂರು: ‘ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಆಚಾರ ದೊಡ್ಡದಲ್ಲ ಅರಿವು ದೊಡ್ಡದು ಎನ್ನುವುದು ಶಿವಕುಮಾರ ಸ್ವಾಮೀಜಿ ಅವರ ಧ್ಯೇಯವಾಗಿತ್ತು’ ಎಂದು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.
ಮನುಷ್ಯ ಧರ್ಮವನ್ನು ಸ್ವಾಮೀಜಿ ಪ್ರತಿಪಾದಿಸಿದರು. ಆ ಕಾರಣದಿಂದ ಎಲ್ಲರೂ ಅವರನ್ನು ದೇವರಾಗಿ ಕಾಣುತ್ತಿದ್ದಾರೆ.ಅವರ ಸೇವಾ ಕಾರ್ಯ ಎಲ್ಲರಿಗೂ ಮಾದರಿ. ಲಕ್ಷಾಂತರ ಮಕ್ಕಳಿಗೆ ಪೋಷಕರ ಸ್ಥಾನದಲ್ಲಿ, ಗುರುವಿನ ಸ್ಥಾನದಲ್ಲಿ ಸ್ವಾಮೀಜಿ ಇದ್ದರು ಎಂದು ನುಡಿದರು.
ಮಠದಲ್ಲಿವಿದ್ಯಾಭ್ಯಾಸ ಮಾಡಿದ ಹಲವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದಕ್ಕೆ ಕಾರಣ ಸ್ವಾಮೀಜಿ. ನಮ್ಮ ತಂದೆ ಯಡಿಯೂರಪ್ಪ ಅವರಿಗೆ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳುವ ಆಸೆ ಇತ್ತು. ಆದರೆ ದಾವೋಸ್ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಾನು ಪಾಲ್ಗೊಂಡೆ ಎಂದು ನುಡಿದರು.
ಸ್ವಾಮೀಜಿ ಹುಟ್ಟೂರು ವೀರಾಪುರ ಅಭಿವೃದ್ಧಿಗೆಂದು ಮುಖ್ಯಮಂತ್ರಿ ₹80 ಕೋಟಿ ಅನುದಾನ ನೀಡಿದ್ದಾರೆ ಎಂದು ಘೋಷಿಸಿದರು.
ಯಡಿಯೂರಪ್ಪ ಅವರ ಪರವಾಗಿ ಮತ್ತು ವೇದಿಕೆಯಲ್ಲಿ ಇರುವ ಗಣ್ಯರ ಪರವಾಗಿ ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಮಠದ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತಿದ್ದೇನೆ ಎಂದು ವಿಜಯೇಂದ್ರ ಹೇಳಿದರು.
ಸಿದ್ಧಗಂಗಾ ಮಠದಲ್ಲಿ ಸಂಸ್ಕಾರವಿದೆ: ಹೊರಟ್ಟಿ
‘ಶಿವಕುಮಾರ ಸ್ವಾಮೀಜಿ ಅವರೇ ಭಾರತ ರತ್ನ ಅವರಿಗೆ ಏಕೆ ಕೊಡಬೇಕು ಭಾರತ ರತ್ನ. ಅವರೇ ದೊಡ್ಡ ರತ್ನ. ಬಸವಣ್ಣನನ್ನ ನಾವು ನೋಡಲಿಲ್ಲ. ಆದರೆ ಶಿವಕುಮಾರ ಸ್ವಾಮೀಜಿ ಅವರೆ ನಮಗೆ ಬಸವಣ್ಣ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಜಗತ್ತಿನಲ್ಲಿ ಯಾರೂ ಕೊಡದ ಕೊಡುಗೆಯನ್ನು ಅವರು ನೀಡಿದ್ದಾರೆ. ಸದಾ ಅವರು ನಮ್ಮನಡುವೆ ಇರುತ್ತಾರೆ ಎಂದು ಅಭಿಪ್ರಾಯಪಟ್ಟರು.
ಸಿದ್ಧಲಿಂಗ ಸ್ವಾಮೀಜಿ ಸಹ ಮಕ್ಕಳಿಗೆ ಯಾವುದೇ ಕೊರತೆ ಆಗದಂತೆ ಮಠದ ಆಡಳಿತವನ್ನುನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ನುಡಿದರು.