ತುಮಕೂರು: ಮಧುಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯನ್ನು ಚುಡಾಯಿಸಿ, ಪ್ರೀತಿಸುವಂತೆ ಒತ್ತಾಯಿಸಿದ ಯುವಕನನ್ನು ಗುರುವಾರ ರಾತ್ರಿ ವಿದ್ಯಾರ್ಥಿನಿಯ ಸಹೋದರರು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಥಳಿಸಿದ್ದಾರೆ.
ಮಧುಗಿರಿ ತಾಲ್ಲೂಕಿನ ಸೋಗೇನಹಳ್ಳಿ ಗೊಲ್ಲರಹಟ್ಟಿ ಯುವಕ ಚಿಕ್ಕಣ್ಣ ಮೇಲೆ ಹಲ್ಲೆ ನಡೆದಿದೆ.
ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಪ್ರತಿನಿತ್ಯ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸುತ್ತಿದ್ದ. ನೊಂದ ವಿದ್ಯಾರ್ಥಿನಿಯು ತನ್ನ ಸಹೋದರರಿಗೆ ಮಾಹಿತಿ ನೀಡಿದ್ದಾಳೆ. ಕ್ರೀಡಾಂಗಣದಲ್ಲಿ ಆತನನ್ನು ಥಳಿಸಿ ತಾಂಡಾಕ್ಕೆ ಕರೆದೊಯ್ದು ಕಾಲಿಗೆರಗಿಸಿ ಕ್ಷಮೆ ಕೇಳಿಸಿದ್ದಾರೆ.
ಚಿಕ್ಕಣ್ಣ ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಯುವಕನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.