ಉಡುಪಿ: ಸಹಕಾರ, ಸಹಬಾಳ್ವೆ, ವ್ಯಕ್ತಿತ್ವ ವಿಕಸನ, ಹಿತಮಿತ ಜೀವನ ಶೈಲಿಯ ಅರಿವಿಕೆಗೆ ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ವೇದಿಕೆ ಎಂದು ತೆಂಕನಿಡಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಶ್ವನಾಥ ಕರಬ ಹೇಳಿದರು.
ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಬಿರದ ವೇಳಾಪಟ್ಟಿಯು, ಜೀವನ ಶಿಕ್ಷಣಕ್ಕೆ ಅಗತ್ಯವಿರುವ ವಿಷಯಗಳನ್ನೊಳಗೊಂಡಿದ್ದು, ಸಮಯ ಪರಿಪಾಲನೆಯೊಂದಿಗೆ, ವಿದ್ಯಾರ್ಥಿಗಳಿಗೆ ಸಮಯದ ಮೌಲ್ಯ ಕಲಿಸಿಕೊಡುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಸ್ವಾರ್ಥ ಮನೋಭಾವ ತೊಡೆದು ಕೃತಜ್ಞತೆ ವ್ಯಕ್ತಪಡಿಸುವ ಮನೋಭಾವ ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು.
ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ, ಶೈಕ್ಷಣಿಕ, ಜಾಗೃತಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ನಿತ್ಯಾನಂದ ವಿ.ಗಾಂವ್ಕರ್ ವಹಿಸಿದ್ದರು.
ಕಾರ್ಯಕ್ರಮ ಯೋಜನಾಧಿಕಾರಿ ರಘು ನಾಯ್ಕ, ಮಮತಾ, ಮೇವಿ ಮಿರಾಂದ, ವಾಣಿಜ್ಯ ವಿಭಾಗ ಮುಖ್ಯಸ್ಥ ಬಿಂದು ಟಿ, ಸಹಾಯಕ ಪ್ರಾಧ್ಯಾಪಕಿ ಗೀತಾ, ಸಮಾಜಕಾರ್ಯ ಉಪನ್ಯಾಸಕಿ ಸುಮತಿ, ಶಿಬಿರದ ವಿದ್ಯಾರ್ಥಿ ನಾಯಕಿ ಯವನಿಕ, ವಿದ್ಯಾರ್ಥಿಗಳಾದ ಅಂಕಿತ್ ಕುಮಾರ್, ಸ್ಪೂರ್ತಿ ಕುಮಾರ್, ಅನುಷ ಇದ್ದರು.
ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ, ಗುಂಪುಗಳಿಗೆ ಬಹುಮಾನ ವಿತರಿಸಲಾಯಿತು. ಸ್ಫೂರ್ತಿ ಕುಮಾರ್ ಕಾರ್ಯಕ್ರಮದ ವರದಿ ವಾಚನ ಮಾಡಿದರು. ಗ್ರೀಷ್ಮ ಸ್ವಾಗತಿಸಿದರು. ಶರಣ್ಯ ನಿರೂಪಿಸಿದರು.