ಸಿದ್ದಾಪುರ: ಬ್ರಹ್ಮಾವರ ತಾಲ್ಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪುನುಗು ಬೆಕ್ಕನ್ನು ವಶಕ್ಕೆ ಪಡೆದ ಪುತ್ತೂರಿನ ಪೊಲೀಸ್ ಅರಣ್ಯ ಸಂಚಾರಿ ದಳವು, ಇಬ್ಬರನ್ನು ಬಂಧಿಸಿದೆ. ಸಾಗಾಟಕ್ಕೆ ಬಳಸಲಾದ ಪಂಜರ, ಮಾರುತಿ ಇಕೋ ಕಾರು, ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆಯ ದತ್ತಾತ್ರೇಯ ನಗರದ ನಿವಾಸಿ ಅಸ್ಗರ್ ಅಲಿ ಮತ್ತು ಬಿದ್ಕಲಕಟ್ಟೆ ನಿವಾಸಿ ಶರತ್ ಬಂಧಿತರು. ದಾಳಿ ವೇಳೆ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದ (ಡಬ್ಲ್ಯೂ.ಎಲ್.ಪಿ) ಪೊಲೀಸ್ ಉಪ ನಿರೀಕ್ಷಕ ಜಯ ಕೆ, ಸಿಬ್ಬಂದಿ ಸುಂದರ್ ಶೆಟ್ಟಿ, ಉದಯ್, ರಾಮಕೃಷ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಪಿಗಳು ಮತ್ತು ಜಪ್ತಿ ಮಾಡಿದ ಸೊತ್ತುಗಳನ್ನು ಮುಂದಿನ ತನಿಖೆಗಾಗಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ.