ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಕೈತೋಟದ ಒಣಕಸವೂ ಸಂಪನ್ಮೂಲ

ಉಡುಪಿ ಜಿಲ್ಲಾಧಿಕಾರಿ ವಸತಿಗೃಹದಲ್ಲಿ ನಿರ್ಮಾಣವಾದ ಒಣ ಎಲೆ ಕಾಂಪೋಸ್ಟ್ ಬೆಡ್
Last Updated 4 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಉಡುಪಿ: ಮನೆಯ ಮುಂದಿರುವ ಕೈತೋಟದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಒಣ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿಕೊಂಡರೆ ಕಸ ಕೂಡ ಸಂಪನ್ಮೂಲವಾಗಿ ಬದಲಾಗಲಿದೆ. ನಿಮ್ಮ ಕೈತೋಟವೂ ಸ್ವಚ್ಛ ಹಾಗೂ ಸುಂದರವಾಗಲಿದೆ.

ತ್ಯಾಜ್ಯ ವಿಲೇವಾರಿಯಲ್ಲಿ ರಾಜ್ಯಕ್ಕೆ ಮಾದರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿರುವ ಉಡುಪಿ ಜಿಲ್ಲೆಯಲ್ಲಿ ‘ಒಣ ಎಲೆ ಸಾವಯವ ಗೊಬ್ಬರದ ಬೆಡ್‌’ ನಿರ್ಮಾಣ ಮಾಡುವ ಪರಿಸರ ಸ್ನೇಹಿ ಕಾರ್ಯಕ್ರಮ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರ ವಸತಿ ಗೃಹದಲ್ಲಿ ಪ್ರಾಯೋಗಿಕವಾಗಿ ಸಾಕಾರಗೊಂಡಿದೆ.

ಜಿಲ್ಲಾಧಿಕಾರಿ ಸ್ವತಃ ಆಸಕ್ತಿ ವಹಿಸಿ ಎಸ್‌ಎಲ್‌ಆರ್‌ಎಂ ಸ್ವಚ್ಛತಾ ಕಾರ್ಯರ್ತರ ಸಹಕಾರ ಹಾಗೂ ಶ್ರಮದಾನದಲ್ಲಿ ತಮ್ಮ ವಸತಿ ಗೃಹದಲ್ಲಿರುವ ಕೈತೋಟದಲ್ಲಿ ‘ಒಣ ಎಲೆ ಸಾವಯವ ಗೊಬ್ಬರದ ಬೆಡ್‌’ ತಯಾರಿಸಿಕೊಂಡಿದ್ದಾರೆ.

ಸಾವಯವ ಬೆಡ್ ನಿರ್ಮಾಣ ಹೇಗೆ:

ಕೈತೋಟದಲ್ಲಿ ಸಂಗ್ರಹವಾಗುವ ಒಣ ಎಲೆ, ಹುಲ್ಲು, ಒಣ ತ್ಯಾಜ್ಯವನ್ನು ಒಟ್ಟುಮಾಡಿ ಸಗಣಿಯೊಂದಿಗೆ ಮಿಶ್ರಣ ಮಾಡಿ 10x6 ಅಳತೆಯ ಬೆಡ್ ಮಾದರಿಯನ್ನಾಗಿ ನಿರ್ಮಿಸಿಕೊಳ್ಳಬೇಕು. ಬೆಡ್ ಮೇಲೆ ಗೋಣಿಚೀಲದ ಹೊದಿಕೆಗಳನ್ನು ಹಾಕಿ ಪ್ರತಿ ದಿನ ನೀರು ಸಿಂಪರಣೆ ಮಾಡಬೇಕು. ಹೀಗೆ ಮಾಡಿದರೆ ಒಣ ತ್ಯಾಜ್ಯ 45 ದಿನಗಳ ಬಳಿಕ ಗುಣಮಟ್ಟದ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗಲಿದೆ.

ಹೀಗೆ ತಯಾರಾದ ಗೊಬ್ಬರವನ್ನು ಕೈತೋಟದಲ್ಲಿರುವ ಹೂ, ಹಣ್ಣು, ತರಕಾರಿ ಗಿಡಗಳಿಗೆ ಬಳಸಬಹುದು. ಅಥವಾ ರೈತರಿಗೆ ಮಾರಾಟ ಮಾಡಬಹುದು. ‘ಒಣ ಎಲೆ ಸಾವಯವ ಬೆಡ್‌’ ನಿರ್ಮಿಸುವುದರಿಂದ ಸಾವಯವ ಗೊಬ್ಬರ ಮಾತ್ರವಲ್ಲ; ಮನೆಯ ಆವರಣವೂ ಕಸ ಮುಕ್ತವಾಗಲಿದೆ. ಸ್ವಚ್ಛತೆ ಕಂಗೊಳಿಸಲಿದೆ.

ಜಿಲ್ಲಾಧಿಕಾರಿ ವಸತಿಗೃಹದಲ್ಲಿ ಈಗಾಗಲೇ ಹಸಿ ಕಸ ನಿರ್ವಹಣೆಗೆ ಡ್ರಮ್ ಕಾಂಪೋಸ್ಟ್ ವಿಧಾನ ಅಳವಡಿಸಲಾಗಿದೆ. ಇದೀಗ ಒಣ ಕಸ ನಿರ್ವಹಣೆ ಮಾಡುವ ಮೂಲಕ ವಸತಿಗೃಹವನ್ನು ಮಾದರಿಯನ್ನಾಗಿ ಮಾಡಲು ಹೊರಟಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್‌.ಪ್ರಸನ್ನ ನಿರ್ದೇಶನದಂತೆ ಜಿಲ್ಲಾಧಿಕಾರಿ
ನಿವಾಸದ ಕೈತೋಟದಲ್ಲಿ ಎಸ್‌ಎಲ್‌ಆರ್‌ಎಂ ಸ್ವಚ್ಛತಾ ಕಾರ್ಯಕರ್ತರು ಕಾಂಪೋಸ್ಟ್ ಬೆಡ್‌ ನಿರ್ಮಿಸಿದ್ದಾರೆ. ಕಾಂಪೋಸ್ಟ್ ಬೆಡ್ ತಯಾರಿ ಬಗ್ಗೆ ಸ್ವಚ್ಛತಾ ಕಾರ್ಯಕರ್ತರು ಖ್ಯಾತ ತಜ್ಞ ವೆಲ್ಲೊರ್ ಶ್ರೀನಿವಾಸನ್ ಅವರಿಂದ ತರಬೇತಿ ಪಡೆದಿದ್ದಾರೆ. ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ರಘುನಾಥ್ ಮಾರ್ಗದರ್ಶನ ನೀಡಿದ್ದಾರೆ.

‘ಎಲ್ಲ ಸರ್ಕಾರಿ ಕಚೇರಿ ಆವರಣದಲ್ಲಿ ಅನುಷ್ಠಾನ’

ಜಿಲ್ಲೆಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಹಲವು ವಿಧಾನಗಳ ಮೂಲಕ ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದ್ದು ವಿನೂತನ ಡ್ರೈ ಲೀವ್ಸ್ ಕಾಂಪೋಸ್ಟ್ ಬೆಡ್ ಮಾದರಿಯನ್ನು ಮೊದಲು ಸರ್ಕಾರಿ ಅಧಿಕಾರಿಗಳ ಮನೆಯಲ್ಲಿಯೇ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಅವರ ವಸತಿಗೃಹದಲ್ಲೇ ಪ್ರಥಮವಾಗಿ ಅಳವಡಿಸಲಾಗಿದೆ. ಮುಂದೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ, ಪ್ರಾಥಮಿಕ ಅರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವ ಚಿಂತನೆ ಇದೆ. ಕಾಂಪೋಸ್ಟ್ ಬೆಡ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಎಸ್‌ಎಲ್‌ಆರ್‌ಎಂ ಸ್ವಚ್ಛತಾ ಕಾರ್ಯಕರ್ತರಿಂದ ಪಡೆಯಬಹುದು.

–ಎಚ್‌.ಪ್ರಸನ್ನ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT