ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆಯ ಹಾದಿಯಲ್ಲಿ ಮತ್ಸ್ಯೋದ್ಯಮ: ಮೀನುಂಟು; ದರವಿಲ್ಲ

ಡೀಸೆಲ್ ದರ ಏರಿಕೆ, ಹವಾಮಾನ ವೈಪರೀತ್ಯ ಸವಾಲು
Last Updated 3 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌–19 ಕಾರಣದಿಂದ ಭಾರಿ ನಷ್ಟ ಅನುಭವಿಸಿದ್ದ ಮೀನುಗಾರಿಕಾ ಉದ್ಯಮ ಇದೀಗ ಚೇತರಿಕೆಯ ಹಾದಿಗೆ ಮರಳುತ್ತಿದೆ. ಮೀನಿನ ಕ್ಷಾಮ, ದರ ಕುಸಿತ, ಚಂಡ ಮಾರುತ ಪ್ರಭಾವ ಹೀಗೆ, ಸತತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಮೀನುಗಾರಿಕೆ ಮಗ್ಗುಲು ಬದಲಿಸುತ್ತಿದ್ದು, ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಉತ್ತಮ ಮೀನಿನ ಇಳುವರಿ ಸಿಗುತ್ತಿದೆ.

ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮೀನುಗಾರಿಕೆ ಸ್ವಲ್ಪ ಸುಧಾರಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಬಂಪರ್ ಮೀನಿನ ಇಳುವರಿ ಇಲ್ಲದಿದ್ದರೂ, ಉತ್ತಮ ಪ್ರಮಾಣದ ಮೀನುಗಳು ಸಿಗುತ್ತಿದ್ದು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಮಾರುಕಟ್ಟೆಯಲ್ಲಿ ದರ ಕುಸಿತ ಹಾಗೂ ದುಬಾರಿ ಬೆಲೆಯ ರಫ್ತಾಗುವ ಮೀನುಗಳ ಪ್ರಮಾಣ ಕುಸಿತವಾಗಿರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ಬೋಟ್ ಮಾಲೀಕರು.

ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ಹೆಚ್ಚಾಗಿ ರಫ್ತಾಗುವ ಬೊಂಡಾಸ್ (ಸ್ಕ್ವಿಡ್), ಪ್ರಾನ್ಸ್‌ ಸೇರಿದಂತೆ ಹಲವು ಜಾತಿಯ ಮೀನುಗಳ ಇಳುವರಿ ಕುಸಿದಿದೆ. ಪರಿಣಾಮ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಪ್ರತಿ ವರ್ಷ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದ ಅಂಜಲ್ ಮೀನಿನ ಬೆಲೆಯೂ ಭಾರಿ ಇಳಿಕೆಯಾಗಿರುವುದು ಮೀನುಗಾರರಿಗೆ ದೊಡ್ಡ ಹೊಡೆತ ಎನ್ನುತ್ತಾರೆ ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಕರ್ ಸುವರ್ಣ.

ಕೋವಿಡ್ ಕಾರಣದಿಂದ ಕೇರಳ, ಚೆನ್ನೈ ಸೇರಿದಂತೆ ಹಲವು ಕಡೆಗಳಲ್ಲಿ ಮಾರುಕಟ್ಟೆ ಸಂಪೂರ್ಣವಾಗಿ ತೆರೆದುಕೊಳ್ಳದ ಕಾರಣ ಮಲ್ಪೆ ಬಂದರಿನಿಂದ ಹೆಚ್ಚಿನ ಮೀನು ಹೊರತೆ ಸಾಗಾಟವಾಗುತ್ತಿಲ್ಲ. ಪರಿಣಾಮ, ಮೀನಿನ ದರ ಇಳಿಕೆಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇರುವ ಅಂಜಲ್‌ ಮೀನು ಕಳೆದ ವರ್ಷ ಕೆಜಿಗೆ ₹ 500 ರಿಂದ ₹ 800 ರವರೆಗೆ ಮಾರಾಟವಾಗಿತ್ತು. ಈ ವರ್ಷ ದರ ₹ 300ಕ್ಕೆ ಕುಸಿತವಾಗಿದೆ ಎನ್ನುತ್ತಾರೆ ಅವರು.

ಚಂಡಮಾರುತದ ಬಿಸಿ:

ಜಿಲ್ಲೆಯಲ್ಲಿ ಆಗಸ್ಟ್‌ ಕೊನೆಯ ವಾರದಲ್ಲಿ ಮೀನುಗಾರಿಕೆ ಆರಂಭವಾಗಿದ್ದು, ಒಂದು ತಿಂಗಳು ಮಾತ್ರ ಬೋಟ್‌ಗಳು ಸಮುದ್ರಕ್ಕಿಳಿಯಲು ಅವಕಾಶ ಸಿಕ್ಕಿದೆ. ಅಷ್ಟರಲ್ಲಿ 2 ಬಾರಿ ಚಂಡಮಾರುತದ ಎಚ್ಚರಿಕೆ ಬಂದಿದ್ದು, ಮೀನುಗಾರಿಕೆ ಸರಿಯಾಗಿ ನಡೆದಿಲ್ಲ. ಪದೇ ಪದೇ ಚಂಡಮಾರುತ ಹಾಗೂ ಹವಾಮಾನ ವೈಪರೀತ್ಯ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದ್ದು, ಮೀನುಗಾರಿಕೆ ಮತ್ತೆ ನಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ.

‘ಡೀಸೆಲ್ ದರ ಏರಿಕೆ ಹೊಡೆತ’

ಡೀಸೆಲ್‌ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಮೀನುಗಾರಿಕೆಗೆ ಅಡ್ಡಿಯಾಗಿದೆ. ಕಳೆದ 2 ವರ್ಷಗಳಲ್ಲಿ ಡೀಸೆಲ್ ದರ ಶೇ 30ರಷ್ಟು ಏರಿಕೆಯಾಗಿದೆ. ಸರ್ಕಾರದಿಂದ 2 ತಿಂಗಳ ಡೀಸೆಲ್ ಸಬ್ಸಿಡಿ ಬರಬೇಕಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದರೆ ಕನಿಷ್ಠ ₹ 4 ರಿಂದ ₹ 5 ಲಕ್ಷ ಖರ್ಚು ಬರುತ್ತದೆ. ₹ 6 ಲಕ್ಷ ಮೌಲ್ಯದ ಮೀನು ಸಿಕ್ಕರೆ ಲಾಭ ಕಾಣಬಹುದು. ಆದರೆ, ಅಷ್ಟು ಸಿಗುತ್ತಿಲ್ಲ. ಡೆಲಿವರಿ ಪಾಯಿಂಟ್‌ನಲ್ಲಿ ಡೀಸೆಲ್ ಕೊಡುವ ವ್ಯವಸ್ಥೆಯಾಗಬೇಕು, ರಸ್ತೆ ತೆರಿಗೆ ಮನ್ನಾ ಮಾಡಬೇಕು. ಬಾಕಿ ಡೀಸೆಲ್ ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸುತ್ತಾರೆ ಬೋಟ್‌ ಮಾಲೀಕರು.

‘ನಾಡದೋಣಿಗೆ ಮೀನಿಲ್ಲ’

ಮೀನುಗಾರಿಕಾ ಸುಗ್ಗಿ ಉತ್ತಮವಾಗಿದ್ದರೂ ಚಂಡಮಾರುತದ ಪ್ರಭಾವದಿಂದಾಗಿ ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿದೆ. ಸಮುದ್ರದೊಳಗೆ ನೀರಿನ ಒತ್ತಡ ಹೆಚ್ಚಾಗಿದ್ದು, ನಾಡದೋಣಿ ಹಾಗೂ ಕೈರಂಪಣಿ ಬಲೆಗಳಿಗೆ ನಿರೀಕ್ಷಿತ ಪ್ರಮಾಣದ ಮೀನುಗಳು ಸಿಗುತ್ತಿಲ್ಲ. ಗಾಳಿ ಸರಿಯಾದ ದಿಕ್ಕಿನಲ್ಲಿ ಬೀಸಿದರೆ, ನೀರಿನಲ್ಲಿ ಒತ್ತಡ (ವಿದ್ಯುತ್‌ಕಾಂತೀಯ ಶಕ್ತಿ) ಕಡಿಮೆ ಇದ್ದರೆ ಬೊಳಿಂಜರ್‌, ಕೊಡೈ, ಬೂತಾಯಿ, ಮಾಂಜಿ ಮೀನುಗಳು ಹೆಚ್ಚಾಗಿ ಸಿಗುತ್ತವೆ. ಆದರೆ, ಈ ವರ್ಷ ತಿನ್ನಲು ಯೋಗ್ಯವಲ್ಲದ ಚಮ್ಮನ್ ಜಾತಿಯ ಮೀನುಗಳು ಹೆಚ್ಚಾಗಿ ಸಿಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು ನಾಡದೋಣಿ ಮೀನುಗಾರರಾದ ಅಶೋಕ್‌.

‘ದರ ಇಳಿಕೆ ಬಿಸಿ’

ಈ ವರ್ಷ ಮೀನಿನ ಇಳುವರಿ ಉತ್ತಮವಾಗಿರುವುದು ಮೀನುಗಾರರಲ್ಲಿ ಸಂತಸ ಮೂಡಿಸಿದ್ದರೆ ದರ ಕುಸಿತದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಎಲ್ಲ ಬಂದರಿನಲ್ಲೂ ಮೀನಿನ ಪ್ರಮಾಣ ಹೆಚ್ಚಾಗಿರುವುದು ದರ ಕುಸಿತಕ್ಕೆ ಕಾರಣವಾಗಿದೆ. ಅಂಜಲ್ ಸೇರಿದಂತೆ ಕೆಲವು ಜಾತಿಯ ಮೀನುಗಳ ದರ ಶೇ 50ರಷ್ಟು ಕುಸಿತವಾಗಿದೆ ಎನ್ನುತ್ತಾರೆ ಟ್ರಾಲ್‌ಬೋಟ್‌ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್‌.

‘ಚೇತರಿಕೆ ನಡುವೆ ಸಮಸ್ಯೆಗಳು ಹಲವು’

ಕಳೆದ ವರ್ಷಕ್ಕೆ ಹೋಲಿಸಿದರೆ ಮೀನುಗಾರಿಕೆ ಚೇತರಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಆದರೆ, ಚಂಡ ಮಾರುತದ ಪ್ರಭಾವ, ಪ್ರತಿಕೂಲ ಹವಾಮಾನ ಮೀನುಗಾರಿಕೆಗೆ ಅಡ್ಡಿಯಾಗಿದೆ. ಜತೆಗೆ, ಡೀಸೆಲ್ ದರ ಏರಿಕೆಯೂ ಮೀನುಗಾರಿಕೆಗೆ ತೊಡಕಾಗಿದೆ. ಸರ್ಕಾರದಿಂದ ಪೂರ್ಣ ಪ್ರಮಾಣದ ಡಿಸೆಲ್ ಸಬ್ಸಿಡಿ ಸಿಗುತ್ತಿಲ್ಲ. ಎಲ್ಲ ಕಡೆ ಮೀನುಗಾರಿಕೆ ಆರಂಭವಾಗಿರುವ ಕಾರಣ ದರ ಕುಸಿತಕಂಡಿದೆ. ರಿಬ್ಬನ್ ಫಿಶ್‌, ಬೊಂಡಾಸ್‌, ಪಾಂಬಲ್‌, ಮದಮಲ್‌ ಸೇರಿದಂತೆ ರಫ್ತಾಗುವ ಮೀನುಗಳ ಸಂತತಿ ಕ್ಷೀಣಿಸುತ್ತಿರುವುದು ಮೀನುಗಾರರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT