ಉಡುಪಿ: ಪ್ರಕೃತಿಯಲ್ಲಿ ಪ್ರತಿ ವಸ್ತುವಿನಲ್ಲಿರುವ ವೈಶಿಷ್ಟ್ಯವನ್ನು ರಕ್ಷಿಸಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪುತ್ತಿಗೆ ಮಠದಲ್ಲಿ ಬುಧವಾರ ಜಾಗೃತಿ ಫೌಂಡೇಷನ್ ಕಾರ್ಕಳದಿಂದ ಪ್ರಕೃತಿ ಸಂರಕ್ಷಣೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು ಸಲುವಾಗಿ ಹಮ್ಮಿಕೊಂಡಿರುವ ರಾಜ್ಯಮಟ್ಟದವಾನರವನ ಅಭಿಯಾನ ಹಾಗೂ ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಹೂ–ಹಣ್ಣಿನ ಗಿಡಗಳನ್ನು ಹೆಚ್ಚು ಬೆಳೆಸಲು ಒತ್ತು ನೀಡಬೇಕು. ತರಗೆಲೆಗಳನ್ನು ಸುಡದೆ ಗೊಬ್ಬರವಾಗಿಸುವುದರಿಂದ ಜೀವಜಂತುಗಳ ಹುಟ್ಟಿಗೆ ಕಾರಣವಾಗುತ್ತವೆ. ಮನೆಯಲ್ಲಿದ್ದ ಕಸ, ಪ್ರಕೃತಿಯಲ್ಲಿದ್ದರೆ ಕಸವೂ ಆಹಾರವೇ ಎಂದರು.
ನೀಲಾವರದ ಗೋಶಾಲೆಯಲ್ಲಿಯೂ ವಾನರ ವನವನ್ನು ಕಾಣಬಹುದು. ಮಾನವನ ಹಸ್ತಕ್ಷೇಪ ಇಲ್ಲದೆ ಅರಣ್ಯ ಸಂರಕ್ಷಣೆ ಮಾಡಿದರೆ ಪ್ರಾಣಿ-ಪಕ್ಷಿಗಳು ಉಳಿಯುತ್ತವೆ ಎಂದು ಸಲಹೆ ನೀಡಿದರು.
ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ವಾನರ ಪ್ರಿಯ ಕೆಲಸದಿಂದ ರಾಮನ ಪ್ರೀತಿ ಪಡೆಯಬಹುದು. ಪ್ರಾಣಿ, ಪಕ್ಷಿಗಳು ಉಳಿದರೆ ಮತ್ರ ಜಗತ್ತು ಉಳಿಯಲು ಸಾಧ್ಯವಿದೆ. ಎಲ್ಲರೂ ಪ್ರಾಣಿ ಪಕ್ಷಿಗಳ ಉಳಿವಿಗೆ ಸಂಕಲ್ಪ ಮಾಡಬೇಕಿದೆ ಎಂದರು.
ವಾನರಗಳಿಗೆ ನೈಸರ್ಗಿಕ ಹಣ್ಣಿನ ತೋಟ ನಿರ್ಮಾಣ ಮಾಡುವ ಸಂಬಂಧ ಪರಿಸರಾಸಕ್ತ ಸಂಘಟನೆಗಳ ಮೂಲಕ ಸರ್ಕಾರಿ-ಅರೆ ಸರ್ಕಾರಿ, ಎನ್ಜಿಒಗಳ ಸಹಯೋಗದೊಂದಿಗೆ ಮೇ 1ರಿಂದ ಏಳು ತಿಂಗಳ ಅವಧಿಯಲ್ಲಿ ಅಭಿಯಾನ ನಡೆಯಲಿದೆ. ಜ.26ರ ಗಣರಾಜೋತ್ಸವದಂದು ಬಹುಮಾನ ವಿತರಣೆ ನಡೆಯಲಿದೆ.
ಸರ್ಕಾರಿ ಜಾಗ, ರಸ್ತೆಯ ಇಕ್ಕೆಲಗಳಲ್ಲಿ ನೈಸರ್ಗಿಕ ಹಣ್ಣಿನ ಗಿಡಗಳನ್ನು ನೆಡಲು ಅವಕಾಶವಿದ್ದು, ವಿಜೇತರಿಗೆ ಪ್ರಥಮ ಬಹುಮಾನವಾಗಿ ₹ 55000 ಹಾಗೂ ಪ್ರತಿ ಜಿಲ್ಲೆಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಗಿಡಗಳನ್ನು ನೆಡುವ ಮೂಲಕ ಅವುಗಳ ಪೋಷಣೆ ಮಾಡಿ ಬೆಳೆಸುವುದು ಅಗತ್ಯ ಎಂದು ಶಿಕ್ಷಕ ರಾಜೇಂದ್ರ ಭಟ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಾಗೃತಿ ಫೌಂಡೇಶನ್ ಅಧ್ಯಕ್ಷ ಆನಂದರಾಯ ನಾಯಕ್, ಸಂಚಾಲಕ ಸಿಯಾ ಸಂತೋಷ್ ನಾಯಕ್, ಕಾರ್ಯಾಧ್ಯಕ್ಷೆ ರಮಿತಾ ಶೈಲೇಂದ್ರ, ಗೌರವ ಸಲಹೆಗಾರ ಗುರ್ಮೆ ಸುರೇಶ್ ಶೆಟ್ಟಿ, ಪಿ.ಸಂತೋಷ್ ಶೆಟ್ಟಿ ತೆಂಕರಗುತ್ತು ಇದ್ದರು.