ಹೆಬ್ರಿ: ಸರ್ಕಾರಿ ಶಾಲೆ ಎಂದರೆ ದೂರ ಸರಿಯುವ ಕಾಲಘಟ್ಟದಲ್ಲಿ ಹೆಬ್ರಿ ತಾಲ್ಲೂಕಿನ 140 ವರ್ಷಗಳ ಹಳೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ದಾಖಲಾತಿ ಪಡೆಯಲು ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 600ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡು ವ್ಯಾಸಂಗ ಮಡುತ್ತಿದ್ದಾರೆ.
ಶತಮಾನ ಕಂಡಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರೂ ಕೊಠಡಿಗಳ ಕೊರತೆ ಎದ್ದು ಕಾಣುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲವಾಗಿವೆ. ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ ಒಂದು ಕೊಠಡಿಯಲ್ಲಿ 40 ರಿಂದ 45 ವಿದ್ಯಾರ್ಥಿಗಳು ಇರಬೇಕು. ಪ್ರಸ್ತುತ ಶಾಲೆಯಲ್ಲಿ 60 ರಿಂದ 70 ವಿದ್ಯಾರ್ಥಿಗಳು ಕಲಿಯುತ್ತಿದ್ದು ಇಕ್ಕಟ್ಟಿನಲ್ಲಿ ಪಾಠ ಕೇಳಬೇಕಾಗಿದೆ.
ಕಾಡುತ್ತಿದೆ ಶಿಕ್ಷಕರ ಕೊರತೆ:
ಶಾಲೆಯಲ್ಲಿ 19 ಖಾಯಂ ಶಿಕ್ಷಕರು ಇರಬೇಕಿದ್ದರೂ ಇರುವುದು ಏಳು ಖಾಯಂ ಶಿಕ್ಷಕರು ಮಾತ್ರ. ಪರಿಣಾಮ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಿದೆ ಎಂದು ಪೋಷಕರು ಆರೋಪಿಸುತ್ತಾರೆ.
ತಡೆಗೋಡೆ ಬೇಕು:
ಶಾಲೆಯ ಭದ್ರತಾ ದೃಷ್ಟಿಯಿಂದ ಕಾಂಪೌಂಡ್ ನಿರ್ಮಿಸಬೇಕಿದೆ. ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಪ್ರವೇಶ ಪಡೆದಿರುವ ಹಿನ್ನೆಲೆಯಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ, ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.
ಪಿಎಂಶ್ರೀ ಯೋಜನೆಗೆ ಆಯ್ಕೆ:
ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಭಾಗವಾಗಿ ಕೇಂದ್ರ ಸರ್ಕಾರದ ಪಿಎಂಶ್ರೀ ಯೋಜನೆಗೆ ಹೆಬ್ರಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಆಯ್ಕೆಯಾಗಿದ್ದು, ಸ್ಮಾರ್ಟ್ ಲ್ಯಾಬ್, ತರಗತಿ, ಗ್ರಂಥಾಲಯ, ಕ್ರೀಡಾ ಕೊಠಡಿ, ತಂತ್ರಜ್ಞಾನ ಆಧಾರಿತ ಬೋಧನಾ ವ್ಯವಸ್ಥೆ, ಕೌಶಲ ಆವಿಷ್ಕಾರ, ಉತ್ತಮ ಮೂಲಸೌಕರ್ಯ ಸಿಗಬೇಕಿದೆ.
ಗ್ರಾಮಕ್ಕೊಂದು ಮಾದರಿ ಶಾಲೆ ಮಾಡಿ:
ಮಕ್ಕಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಶಾಲೆಯನ್ನು ಗುರುತಿಸಿ, ಆಯಾ ಗ್ರಾಮದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಬೇಕು. 1ನೇ ತರಗತಿಯಿಂದಲೇ ಆಂಗ್ಲಭಾಷೆ ಬೋಧಿಸಬೇಕು, ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸೌಲಭ್ಯ ದೊರೆತರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುತ್ತಾರೆ ಪೋಷಕರು.
ಹಳೆ ವಿದ್ಯಾರ್ಥಿಯಿಂದ ₹10 ಲಕ್ಷ ನೆರವು:
ಸರ್ಕಾರಿ ಶಾಲೆಯಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸಲು ಶಾಲೆಯ ಹಳೆ ವಿದ್ಯಾರ್ಥಿ ಉದ್ಯಮಿ ಹೆಬ್ರಿ ಸತೀಶ್ ಪೈ ಕಂಪ್ಯೂಟರ್ ಕೊಠಡಿ ಹಾಗೂ 23 ಕಂಪ್ಯೂಟರ್ ಸೇರಿದಂತೆ ಹಲವು ಶೈಕ್ಷಣಿಕ ಪರಿಕರಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಶಾಲೆಯ ಪೀಠೋಪಕರಣ ಹಾಗೂ ಇತರ ಸೌಲಭ್ಯಕ್ಕಾಗಿ ₹ 5 ಲಕ್ಷ ದೇಣಿಗೆ ನೀಡುವುದಾಗಿಯೂ ತಿಳಿಸಿದ್ದಾರೆ.
ಹೆಮ್ಮೆಯ ಸರ್ಕಾರಿ ಶಾಲೆ ಹೆಬ್ರಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷ 600ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ಹೆಚ್ಚುವರಿ ಕೊಠಡಿಗಳು ಖಾಯಂ ಶಿಕ್ಷಕರ ನೇಮಕವಾಗಬೇಕು ಶತಮಾನದ ಸರ್ಕಾರಿ ಶಾಲೆ ಸುತ್ತಮುತ್ತಲಿನ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತಿದೆ. ಶಿಕ್ಷಣ ಇಲಾಖೆಯು ಶಾಲೆಯ ಅಗತ್ಯತೆಗಳನ್ನು ಶೀಘ್ರ ಪೂರೈಸಬೇಕು. ಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ತಿಪ್ಪೇಸ್ವಾಮಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಹೆಚ್ಚುವರಿ ಶಿಕ್ಷಕರ ನಿಯೋಜನೆ ಹೆಚ್ಚುವರಿ ಕೊಠಡಿಗಳನ್ನು ಸದ್ಯಕ್ಕೆ ನೀಡುವುದು ಕಷ್ಟ. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಮುಗಿದ ನಂತರ ಶಿಕ್ಷಕರ ನಿಯೋಜನೆ ಮಾಡಲಾಗುವುದು. ಹೆಬ್ರಿಯ ಶತಮಾನದ ಶಾಲೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪಡೆದು ಮಾದರಿ ಶಾಲೆಯ ಬೆಳವಣಿಗೆಯ ದೃಷ್ಟಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. –ಪ್ರಸನ್ನ ಎಚ್ ಜಿಲ್ಲಾ ಪಂಚಾಯಿತಿಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ
ಶಾಲೆ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚುವರಿ ಕೊಠಡಿ ಹಾಗೂ ಖಾಯಂ ಶಿಕ್ಷಕರ ಬೇಡಿಕೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ವರ್ಷ ಏಕಾಏಕಿಯಾಗಿ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪ್ರವೇಶ ಪಡೆದಿರುವುದರಿಂದ ಸ್ವಲ್ಪ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಜರುಗಿಸಲಾಗುವುದು. - ಚಂದ್ರಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಕಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.