ಉಡುಪಿ: ಕನ್ನಡ ಮನಸ್ಸುಗಳನ್ನು ಬೆಳೆಸುವ ಮನೋವಿಕಾಸದ ಕೆಲಸ ಮಾಡಿದವರು ಹಿರಿಯ ಪತ್ರಕರ್ತ ದಿ.ಪಾವೆಂ.ಆಚಾರ್ಯರು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.
ರಥಬೀದಿ ಗೆಳೆಯರು ಉಡುಪಿ ಮತ್ತು ಪಾವೆಂ ಆಚಾರ್ಯ ಟ್ರಸ್ಟ್ ಬೆಂಗಳೂರು ಜಂಟಿಯಾಗಿ ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಆಯೋಜಿಸಿದ್ದ ಪಾವೆಂ ಆಚಾರ್ಯ ಸಂಸ್ಮರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾವೆಂ ಅವರೊಳಗೊಂದು ಕ್ರಾಂತಿಯ ಕಿಡಿ ಇತ್ತು. ಆ ಕಿಡಿ ಸುಪ್ತವಾಗಿ ಕೊನೆತನಕವು ಉಳಿದುಕೊಂಡಿತ್ತು. ಅಹಂಕಾರದ ಉದ್ದೀಪನದಿಂದ ಬೆಳೆದ ವ್ಯಕ್ತಿತ್ವ ಅವರದ್ದಾಗಿರಲಿಲ್ಲ. ಬದುಕಿನ ವಿಪರ್ಯಾಸದ ಅರಿವಿನಿಂದ ಬೆಳೆದ ಬೌದ್ಧಿಕ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಹೇಳಿದರು.
ಪಾ.ವೆಂ.ಆಚಾರ್ಯ ಟ್ರಸ್ಟ್ನ ಛಾಯಾ ಉಪಾಧ್ಯಾಯ, ಅಭಿನವ ಪ್ರಕಾಶನದ ರವಿಕುಮಾರ್ ಉಪಸ್ಥಿತರಿದ್ದರು. ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಮಣ್ಯ ಜೋಶಿ ವಂದಿಸಿದರು. ಜೊತೆ ಕಾರ್ಯದರ್ಶಿ ಜಿ.ಪಿ.ಪ್ರಭಾಕರ್ ತುಮರಿ ಕಾರ್ಯಕ್ರಮ ನಿರೂಪಿಸಿದರು.