ಉಡುಪಿ: ‘ರಾಜ್ಯದಲ್ಲಿ ಕೊರೊನಾದಿಂದ ಸತ್ತವರಿಗಿಂತ ಮದ್ಯ ಸಿಗದೆ ಸತ್ತವರ ಸಂಖ್ಯೆ ಹೆಚ್ಚಾಗಿದೆ. ರಾಜ್ಯದಲ್ಲಿ ಶಾಶ್ವತ ಮದ್ಯ ನಿಷೇಧ ಬೇಡಿಕೆಗೆ ಹೆಚ್ಚು ಮಹತ್ವ ಕೊಡುವ ಅಗತ್ಯವಿಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮದ್ಯ ದೇವಾನುದೇವತೆಗಳ ಕಾಲದಿಂದಲೂ ಬಳಕೆಯಲ್ಲಿದೆ. ಮದ್ಯಬೇಕು ಎಂಬ ಜನರ ಬೇಡಿಕೆ ಹಾಗೂ ಆದಾಯ ಸಂಗ್ರಹ ದೃಷ್ಟಿಯಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದರು.
‘ರಾಜ್ಯದಲ್ಲಿ ಮದ್ಯ ಸಂಪೂರ್ಣ ನಿಷೇಧವಾಗಿರಲಿಲ್ಲ. ಲಾಕ್ಡೌನ್ ಅವಧಿಯಲ್ಲಿ ತಾತ್ಕಾಲಿಕವಾಗಿ ಮಾರಾಟ ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಿಸಲಾಗಿದೆ ಅಷ್ಟೆ’ ಎಂದು ಹೇಳಿದರು.
ಚಿತ್ರೋದ್ಯಮ ಆರಂಭಕ್ಕೆ ಒತ್ತಾಯವಿದ್ದು, ಕಲಾವಿದರು ಅಂತರ ಕಾಯ್ದುಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಅವಕಾಶ ನೀಡಿಲ್ಲ. ಪರಿಸ್ಥಿತಿ ಸುಧಾರಣೆಯಾದ ಬಳಿಕ ಚಿತ್ರೋದ್ಯಮ ಆರಂಭವಾಗಲಿದೆ ಎಂದರು.