ಉಡುಪಿ: ಮಾತೃ ಶಕ್ತಿಯ ಮಹತ್ವವನ್ನು ಅರಿತ ಸಮಾಜ ಎಂದೂ ನಾಶವಾಗದು ಎಂದು ಪುರಿ ಗೋವರ್ಧನಪೀಠದ ನಿಶ್ಚಲಾನಂದಸರಸ್ವತೀ ಸ್ವಾಮೀಜಿ ಹೇಳಿದರು.
ಉಡುಪಿ ಭೇಟಿಯ ಮೂರನೇ ದಿನವಾದ ಶುಕ್ರವಾರ ಗುರ್ಮೆಬೆಟ್ಟು ಸುವರ್ಧನ ನಾಯಕ್ ಅವರ ಮನೆಯಲ್ಲಿ ಆಯೋಜಿಸಿದ್ದ ‘ಮಾತೃ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವೆಲ್ಲರೂ ಆರಾಧಿಸುವ ದೇವರನ್ನು ಪುತ್ರನಾಗಿ ಪಡೆಯುವ ಶಕ್ತಿ ಇರುವುದು ಜಗಮಾತೆಗೆ ಮಾತ್ರ. ಆದ್ದರಿಂದ ಸನಾತನ ಹಿಂದೂ ಧರ್ಮದಲ್ಲಿ ತಾಯಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ ಎಂದರು.
ದೇಶಕ್ಕೆ ಆಧ್ಯಾತ್ಮಿಕ ವಿಚಾರಗಳಿರುವ ಶಿಕ್ಷಣದ ಅಗತ್ಯವಿದೆಯೇ ಹೊರತು, ಕಮ್ಯೂನಿಸ್ಟ್ ವಿಚಾರಧಾರೆಗಳನ್ನು ಬಿತ್ತುವ ಪಠ್ಯಪುಸ್ತಕಗಳ ಶಿಕ್ಷಣವಲ್ಲ. ವೈದಿಕ ಸಂಸ್ಕೃತಿ, ಸಂಪ್ರದಾಯಗಳನ್ನು ಸುರಕ್ಷಿತವಾಗಿ ಕಾಪಾಡುವ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.
ವೇದ ಉಪನಿಷತ್ತು, ಆಚಾರ್ಯರ ಪೀಠಗಳು ಶಕ್ತಿ ಕಳೆದುಕೊಂಡರೆ, ಸಮಾಜದಲ್ಲಿ ಮಹಿಳಾ ದೌರ್ಜನ್ಯದಂತಹ ಪಿಡುಗುಗಳು ಜನ್ಮತಾಳುತ್ತವೆ. ಹಾಗಾಗಿ ಮಾತೆಯರು ಜಾಗೃತಗೊಂಡು ಸನಾತನ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಗಂಗಾ, ಕಾವೇರಿ ಮೊದಲಾದ ತೀರ್ಥಕ್ಷೇತ್ರ, ಪುಣ್ಯಸ್ಥಳಗಳು ಸುರಕ್ಷಿತವಾಗಿರಬೇಕು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಎಲ್ಲವೂ ಕಲುಷಿತಗೊಳ್ಳುತ್ತಿವೆ. ಪ್ರಕೃತಿ ಮನುಷ್ಯನ ಮೇಲೆ ಮುನಿದರೆ ಜಗತ್ತು ನಾಶವಾಗುತ್ತದೆ. ಇದನ್ನು ಅರ್ಥೈಸಿಕೊಂಡು ಮನುಷ್ಯ ಮುನ್ನಡೆಯಬೇಕು ಎಂದು ಸ್ವಾಮೀಜಿ ಎಚ್ಚರಿಸಿದರು.
ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ಅರವಿಂದ ಕುಮಾರ್, ಬಾಲಕೃಷ್ಣ ಮದ್ದೋಡಿ, ಮಂಜುನಾಥ್ ಮಣಿಪಾಲ, ರಾಘವೇಂದ್ರ ಕಿಣಿ, ಸುವರ್ಧನ್ ನಾಯಕ್, ಪದ್ಮಾವತಿ ರತ್ನಾಕರ, ಯಶವಂತ್, ಶ್ರೀಶ ನಾಯಕ್ ಹಾಗೂ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ನಯನ ಗಣೇಶ್ ಉಪಸ್ಥಿತರಿದ್ದರು.