ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ತಳಭಾಗಕ್ಕೆ ಉಡುಪಿಯ ಪವಿತ್ರ ಮಣ್ಣನ್ನು ಕಳುಹಿಸಲಾಗುತ್ತಿದೆ ಎಂದು ಅದಮಾರು ಮಠದ ಆಡಳಿತ ಮಂಡಳಿ ತಿಳಿಸಿದೆ.
ಸಂಕಲ್ಪಿತ ರಾಮಮಂದಿರ ಕಾಮಗಾರಿಗೂ ಮುನ್ನ ಮಂದಿರದ ತಳಭಾಗಕ್ಕೆ ದೇಶದ ನೂರಾರು ನದಿಗಳ, ಪುಣ್ಯಕ್ಷೇತ್ರಗಳ ಮಣ್ಣು ಹಾಕಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದ್ದು, ಅದರಂತೆ ಕೃಷ್ಣನಗರಿ ಉಡುಪಿಯ ಮಣ್ಣನ್ನೂ ಕಳುಹಿಸಲಾಗುತ್ತಿದೆ.
ಸೋಮವಾರಪರ್ಯಾಯ ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ ಮಣ್ಣಿಗೆ ಕೃಷ್ಣನ ಗಂಧ ಪ್ರಸಾದ ಹಾಗೂ ನಿರ್ಮಾಲ್ಯವನ್ನಿಟ್ಟು ಮಂಗಳಾರತಿ ಬೆಳಗಿ, ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸಿದರು. ಬಳಿಕ ಮಣ್ಣು ತುಂಬಿದ್ದ ಹಿತ್ತಾಳೆಯ ಕರಂಡಕವನ್ನು ವಿಶ್ವಹಿಂದೂ ಪರಿಷತ್ ಪ್ರಮುಖರಿಗೆ ಹಸ್ತಾಂತರಿಸಲಾಯಿತು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.
ಈ ಸಂದರ್ಭ ವಿಶ್ವಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷಪಿ. ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ದಿನೇಶ್ ಮೆಂಡನ್, ಬಜರಂಗದಳ ಪ್ರಾಂತ ಸಹ ಸಂಚಾಲಕ ಕೆ.ಆರ್. ಸುನೀಲ್, ಮಠದ ವ್ಯವಸ್ಥಾಪಕ ಗೋವಿಂದರಾಜ್, ವಿದ್ವಾನ್ ರಾಮನಾಥ ಆಚಾರ್ಯ, ವಾಸುದೇವ ಭಟ್ ಪೆರಂಪಳ್ಳಿ ಇದ್ದರು.
ಶಿಲಾನ್ಯಾಸಕ್ಕೆ ಪೇಜಾವರ ಶ್ರೀ ಗೈರು
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ವ್ರತದಲ್ಲಿರುವುದರಿಂದ ಅಯೋಧ್ಯೆಯಲ್ಲಿ ಆ.5ರಂದು ನಡೆಯಲಿರುವ ರಾಮಮಂದಿರ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ ಎಂದು ಮಠ ತಿಳಿಸಿದೆ.