ಉಡುಪಿ: ‘ಭೂತ ಕೋಲ ಹಿಂದೂ ಧರ್ಮದ ಸಂಸ್ಕೃತಿಯಲ್ಲ’ ಎಂಬ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಾರ್ಕಳ ನಗರ ಠಾಣೆಗೆ ದೂರು ನೀಡಿದೆ.
ನಟ ಚೇತನ್ ಸಾಮಾಜಿಕ ಜಾಲತಾಣ ಹಾಗೂ ಟಿವಿ ಮಾಧ್ಯಮದಲ್ಲಿ ಹಿಂದೂ ಧರ್ಮಕ್ಕೆ, ದೈವ ದೇವರ ಆಚಾರ ವಿಚಾರಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕರಾವಳಿಯಲ್ಲಿ ಪುರಾತನ ಕಾಲದಿಂದಲೂ ಶ್ರದ್ಧೆ ಭಕ್ತಿಯಿಂದ ಹಿಂದೂಗಳು ದೈವ, ದೇವರು ಹಾಗೂ ಭೂತ ಕೋಲ ಆರಾಧಿಸಿಕೊಂಡು ಬರಲಾಗುತ್ತಿದೆ.
ನಟ ಚೇತನ್ ಹಿಂದೂ ಧರ್ಮದ ಆಚಾರ, ವಿಚಾರ, ನಂಬಿಕೆಗಳಿಗೆ ಧಕ್ಕೆಯಾಗುವಂತೆ ಮಾತನಾಡಿದ್ದು ಖಂಡನೀಯವಾಗಿದ್ದು ಕಾನೂನು ಕ್ರಮ ಜರುಗಿಸಬೇಕು. ಇಂತಹ ಹೇಳಿಕೆಗಳನ್ನು ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ದೂರಿನ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಕಳ ನಗರ ಠಾಣೆ ಪಿಎಸ್ಐ ನಟ ಚೇತನ್ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಜಾಗರಣಾ ವೇದಿಕೆಯಿಂದ ದೂರು ಸಲ್ಲಿಕೆಯಾಗಿದ್ದು ಪರಿಶೀಲಿಸಲಾಗತ್ತಿದೆ. ಇದುವರೆಗೂ ಚೇತನ್ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದರು.