ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ಮಡಿ ದೇವರಾಯನ ಶಿಲಾ ಶಾಸನ ಪತ್ತೆ

Last Updated 6 ಮೇ 2022, 15:01 IST
ಅಕ್ಷರ ಗಾತ್ರ

ಉಡುಪಿ: ಕಲ್ಯಾಣಪುರ ಪಂಚಾಯಿತಿ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಕೆಮ್ಮಣ್ಣು-ನಡಂಬಳ್ಳಿ ನಡುವಿನ ಮುದಲಕಟ್ಟ ಪ್ರದೇಶದಲ್ಲಿ ವಿಜಯನಗರ ದೊರೆ ಇಮ್ಮಡಿ ದೇವರಾಯನ ಶಾಸನ ಪತ್ತೆಯಾಗಿದೆ.

ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕ ಎಸ್.ಎ.ಕೃಷ್ಣಯ್ಯ ಹಾಗೂ ಯು.ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಕೆ.ಶ್ರೀಧರ ಭಟ್ ನೇತೃತ್ವದಲ್ಲಿ ಸಂಶೋಧನಾ ವಿದ್ಯಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಶಾಸನದ ಅಧ್ಯಯನ ನಡೆಸಿದ್ದಾರೆ.

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಶಾಸನವು ಕನ್ನಡ ಲಿಪಿಯ 24 ಸಾಲುಗಳನ್ನು ಒಳಗೊಂಡಿದ್ದು, 3 ಅಡಿ ಎತ್ತರ ಹಾಗೂ 2 ಅಡಿ ಅಗಲ ಹೊಂದಿದ್ದು, ಸಂಪೂರ್ಣವಾಗಿ ಸವೆದು ಹೋಗಿದೆ.

ಶ್ರೀ ಗಣಾಧಿಪತೆಯೇ ನಮಃ ಎಂಬ ಶ್ಲೋಕದಿಂದ ಪ್ರಾರಂಭವಾಗುವ ಶಾಸನವು ಶಕವರುಷ 1353 (ಕ್ರಿ.ಶ 1431) ವಿರೋಧಿಕೃತ ಸಂವತ್ಸರಕ್ಕೆ ಸೇರಿದ್ದಾಗಿದೆ ಎಂಬ ಉಲ್ಲೇಖವಿದೆ.

ಬಾರಕೂರು ನಾಡನ್ನು ಇಮ್ಮಡಿ ದೇವರಾಯನ ನಿರೂಪದಿಂದ ಮಹಾಪ್ರಧಾನ ಚಂಡರಸ ಒಡೆಯನು ಆಳ್ವಿಕೆ ನಡೆಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಕಾಲಘಟ್ಟದಲ್ಲಿ ದೇವರ ಪರ್ವದ ಮೂರು ದಿನದ ಹಬ್ಬಕ್ಕೆ ದಾನ ನೀಡಿರುವುದು ಶಾಸನದಿಂದ ತಿಳಿದು ಬಂದಿದೆ.

ದಾನಕ್ಕೆ ಮಂಜಣ್ಣ ಸೆಟ್ಟಿ ಹಾಗೂ ಆತನ ಅಳಿಯ ಕೋಮ ಸೆಟ್ಟಿಯ ಒಪ್ಪ, ಬ್ರಹ್ಮರ ಊರು ಏಳು ಮಂದಿಯ ಒಪ್ಪ, ಕಂಚಿಯ ಕಬ್ಬೆಯ ಹೊಣೆಯನ್ನು ಉಲ್ಲೇಖಿಸಲಾಗಿದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದಾಗಿದೆ. ಶಾಸನವು ಯಾವ ದೇವರ ಯಾವ ಪರ್ವದ ಹಬ್ಬಕ್ಕೆ ದಾನ ನೀಡಿರುವುದು ಎಂಬ ಮಾಹಿತಿ ಸ್ಪಷ್ಟವಾಗಿ ಇಲ್ಲ.

ಗುಂಡು ಶೆಟ್ಟಿ ಎಂಬುವರ ಜಗದಲ್ಲಿ ಶಾಸನ ಕಂಡುಬಂದಿದ್ದು, ಕ್ಷೇತ್ರಕಾರ್ಯ ಶೋಧನೆಗೆ ಆನಂದ ಬಂಗೇರ ಹಾಗೂ ಸ್ಥಳೀಯರು ಸಹಕಾರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT