ಉಡುಪಿ: ಕೆಎಂಎಫ್ ನಿರ್ದೇಶಕ ಸಾವು

ಸಿದ್ದಾಪುರ(ಉಡುಪಿ): ವಾರಾಹಿ ಹೊಳೆಯ ಹಾಲಾಡಿ ಎಂಬಲ್ಲಿ ಬುಧವಾರ ಸೇತುವೆಗೆ ಕಾರು ಡಿಕ್ಕಿ ಹೊಡೆದು ರಾಜಕೀಯ ಧುರೀಣ, ಕೆಎಂಎಫ್ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ (60) ಮೃತರಾಗಿದ್ದಾರೆ.
ಶಂಕರನಾರಾಯಣದಿಂದ ಹಾಲಾಡಿಗೆ ಕಾರ್ಯಕ್ರಮಕ್ಕೆ ತೆರಳಿ ಹಿಂದಿರುಗುವಾಗ ಕಾರಿನ ನಿಯಂತ್ರಣ ತಪ್ಪಿ ಹಾಲಾಡಿ ಹೊಳೆಯ ಸೇತುವೆಗೆ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತರಾಗಿದ್ದಾರೆ. ಇವರೊಂದಿಗಿದ್ದ ಸಹ ಸವಾರ ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರು ಬಿಜೆಪಿ ಮುಖಂಡರಾಗಿದ್ದು ಕುಂದಾಪುರ ತಾಲ್ಲೂಕು ಪಂಚಾಯಿತಿ ಹಾಗೂ ಶಂಕರನಾರಾಯಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಶಂಕರನಾರಾಯಣ ಸಿಎ ಬ್ಯಾಂಕ್ ನಿರ್ದೇಶಕರಾಗಿದ್ದು, ಮಾಜಿ ಅಧ್ಯಕ್ಷರಾಗಿದ್ದರು.
ಕುಂದಾಪುರ ವರದಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದರು. ಉಡುಪಿ ಜಿಲ್ಲಾ ರೈತ ಸಂಘದ ಸದಸ್ಯ, ಶಂಕರನಾರಾಯಣ– ಬೈಲೂರು ಹಾಲುತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದಾರೆ. ಶಂಕರನಾರಾಯಣ ಭಾಗದ ಬಿಜೆಪಿಯ ಪ್ರಮುಖ ಮುಖಂಡರಾಗಿದ್ದು, ಪತ್ನಿ ಮಮತಾ ಶೆಟ್ಟಿ ಉಡುಪಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿದ್ದರು. ಕುಂದಾಪುರ ತಾಲ್ಲೂಕು ಉತ್ತಮ ಕೃಷಿಕ ಪ್ರಶಸ್ತಿ, ಪ್ರತಿಷ್ಠಿತ ಸಬ್ಲಾಡಿ ಸೀನಪ್ಪ ಶೆಟ್ಟಿ ಕೃಷಿ ಸಾಧಕ ಪ್ರಶಸ್ತಿಗಳು ಅವರಿಗೆ ದೊರೆಕಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.