ಉಡುಪಿ: ಸಾರ್ವರ್ಕರ್ ಭಾವಚಿತ್ರ ಅಳವಡಿಕೆಗೆ ಆಕ್ಷೇಪ ಸಲ್ಲಿಸಿದರೆ ಸ್ವಾತಂತ್ರ್ಯಕ್ಕೆ ಆಕ್ಷೇಪ ಸಲ್ಲಿಸಿದಂತೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಉಡುಪಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಪಿಎಫ್ಐ ಸಂಘಟನೆ ಟಿಪ್ಪು ಹಾಗೂ ಸಾವರ್ಕರ್ ನಡುವೆ ಹೋಲಿಕೆ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಶಾಂತಿ ಕದಡುವವರನ್ನು ಸರ್ಕಾರ ಹದ್ದುಬಸ್ತಿನಲ್ಲಿ ಇಡಲಿದೆ ಎಂದು ತಿಳಿಸಿದರು.
ಸಾರ್ವಕರ್ ದೇಶಭಕ್ತ ಹಾಗೂ ಸ್ವಾತಂತ್ರ್ಯ ಸೇನಾನಿಯಾಗಿದ್ದು ಸಮಾಜ ಪುರಸ್ಕರಿಸಿ ಗೌರವಿಸಬೇಕು. ಪಿಎಫ್ಐ ಸಂಘಟನೆ ಸಾವರ್ಕರ್ ಅವರನ್ನು ವಿರೋಧಿಸುತ್ತದೆ ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಅಳವಡಿಸಿರುವ ಅವರ ಭಾವಚಿತ್ರಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎರಡು ಕರಿನೀರಿನ ಶಿಕ್ಷೆ ಅನುಭವಿಸಿರುವ ಸಾವರ್ಕರ್ ಬಗ್ಗೆ ತಿಳಿಯಬೇಕಾದರೆ ಅಂಡಮಾನ್ ಜೈಲಿಗೆ ಭೇಟಿನೀಡಬೇಕು. ಅವರ ಬಗ್ಗೆ ಆಕ್ಷೇಪ ಸಹಿಸಲು ಸಾಧ್ಯವಿಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.