ಶಿರಸಿ:ಅಗ್ನಿಪಥ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಜೂನ್ 27ರಂದು ಜಿಲ್ಲೆಯಾದ್ಯಂತ ಸತ್ಯಾಗ್ರಹ ನಡೆಸಿ, ಯುವಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಪರಿಚಯಿಸಲು ಹೊರಟಿರುವ ಈ ಯೋಜನೆಯ ಅಡಿ ಯುವಕರಿಗೆ ನಾಲ್ಕು ವರ್ಷ ಕೆಲಸ ನೀಡಿ ನಂತರ ಮನೆಗೆ ಕಳುಹಿಸುತ್ತಾರೆ. ನಿರುದ್ಯೋಗ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ’ ಎಂದು ಆರೋಪಿಸಿದರು.
‘ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯವರು ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಕನಿಷ್ಠ ಪ್ರಮಾಣದ ಉದ್ಯೋಗ ಸೃಷ್ಟಿಯೂ ಆಗಿಲ್ಲ. ಈಗ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆಯೆ ಹೆಚ್ಚಿದೆ. ವಿದ್ಯಾವಂತರು ಕೂಲಿ ಮಾಡಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.
‘ಪ್ರತಿ ವರ್ಷ ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳಿಗೆ ಅರ್ಹ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಅದನ್ನು ಬಿಟ್ಟು ಜನರಿಗೆ ಅಲ್ಪಾವಧಿ ಕೆಲಸದ ಆಸೆ ತೋರಿಸುವ ಯೋಜನೆ ರೂಪಿಸಿದೆ. ಯೋಧನಾಗಲು ಕೇವಲ ನಾಲ್ಕು ತಿಂಗಳ ತರಬೇತಿ ಸಾಲದು. ಕನಿಷ್ಠ ತರಬೇತಿಗೆ ಎರಡು ವರ್ಷವಾದರೂ ಬೇಕು. ಪದವಿ ಪಡೆಯುವ ವಯಸ್ಸಿನಲ್ಲಿ ಅಗ್ನಿವೀರರಾದರೆ ಭವಿಷ್ಯದಲ್ಲಿ ಪದವಿಯೂ ಇಲ್ಲದೆ, ಉದ್ಯೋಗವೂ ಇಲ್ಲದೆ ಅತಂತ್ರರಾಗುವ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಅಬ್ಬಾಸ್ ತೊನ್ಸೆ, ಜಗದೀಶ ಗೌಡ, ಬಸವರಾಜ ದೊಡ್ಮನಿ ಇದ್ದರು.